ನವದೆಹಲಿ : ದೆಹಲಿ ಮೂಲದ ‘ಅರ್ಥ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್’ (EIL) ಎಂಬ ರಿಯಲ್ ಎಸ್ಟೇಟ್ ಕಂಪನಿಯು ಸುಮಾರು 19,425 ಮನೆ ಖರೀದಿದಾರರು ಮತ್ತು ಹೂಡಿಕೆದಾರರಿಗೆ ₹2,024.45 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಭಾರಿ ದಾಳಿ ನಡೆಸಿದೆ. ದೆಹಲಿ ಮತ್ತು ಗುರುಗ್ರಾಮದ 10 ವಿವಿಧ ಸ್ಥಳಗಳಲ್ಲಿ ಶುಕ್ರವಾರ ಆರಂಭವಾದ ಈ ಶೋಧ ಕಾರ್ಯದಲ್ಲಿ ₹6.3 ಕೋಟಿ ನಗದು ಮತ್ತು ₹7.5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಬೆಳ್ಳಿ ಗಟ್ಟಿಗಳು ಮತ್ತು ಐಷಾರಾಮಿ ವಾಚ್ಗಳನ್ನು ಸಹ ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಕಂಪನಿಯು ದೆಹಲಿ-ಎನ್ಸಿಆರ್ ಮತ್ತು ಲಕ್ನೋದಲ್ಲಿ ‘ಅರ್ಥ್’ ಬ್ರಾಂಡ್ ಅಡಿಯಲ್ಲಿ ಅರ್ಥ್ ಟೌನ್, ಅರ್ಥ್ ಸಫೈರ್ ಕೋರ್ಟ್ ಸೇರಿದಂತೆ ಹಲವು ಬೃಹತ್ ವಸತಿ ಯೋಜನೆಗಳನ್ನು ಆರಂಭಿಸಿತ್ತು. ಸಕಾಲದಲ್ಲಿ ಮನೆಗಳನ್ನು ಹಸ್ತಾಂತರಿಸುವುದಾಗಿ ಮತ್ತು ಹೂಡಿಕೆದಾರರಿಗೆ ಖಚಿತ ಲಾಭ ನೀಡುವುದಾಗಿ ನಂಬಿಸಿ ಸಾವಿರಾರು ಜನರಿಂದ ಭಾರಿ ಪ್ರಮಾಣದ ಹಣವನ್ನು ಸಂಗ್ರಹಿಸಿತ್ತು. ಆದರೆ, ಹಣ ಪಡೆದ ನಂತರ ಯೋಜನೆಗಳನ್ನು ಪೂರ್ಣಗೊಳಿಸದೆ ಗ್ರಾಹಕರಿಗೆ ವಂಚಿಸಲಾಗಿದೆ. ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗದ ಐದು ಎಫ್ಐಆರ್ ಹಾಗೂ ಗಂಭೀರ ವಂಚನೆ ತನಿಖಾ ಕಚೇರಿ (SFIO) ನೀಡಿದ ದೂರಿನ ಆಧಾರದ ಮೇಲೆ ಇಡಿ ಈ ಕ್ರಮ ಕೈಗೊಂಡಿದೆ.
ತನಿಖೆಯ ವೇಳೆ ಕಂಪನಿಯು ಗ್ರಾಹಕರಿಂದ ಪಡೆದ ಹಣವನ್ನು ಉದ್ದೇಶಿತ ಯೋಜನೆಗಳಿಗೆ ಬಳಸದೆ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸಂಗ್ರಹಿಸಿದ ಹಣವನ್ನು ಗುರುಗ್ರಾಮ, ದೆಹಲಿ ಮತ್ತು ರಾಜಸ್ಥಾನದಲ್ಲಿ ಅಕ್ರಮವಾಗಿ ಭೂಮಿ ಖರೀದಿಸಲು ಬಳಸಲಾಗಿದೆ ಅಥವಾ ಶೆಲ್ ಕಂಪನಿಗಳ ಮೂಲಕ ಹಣವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಇಡಿ ಆರೋಪಿಸಿದೆ. 2018 ರಿಂದಲೇ ದಿವಾಳಿತನ ಪ್ರಕ್ರಿಯೆಗೆ ಒಳಪಟ್ಟಿರುವ ಈ ಕಂಪನಿಯ ಮಾಜಿ ನಿರ್ದೇಶಕರು ಮತ್ತು ಪ್ರವರ್ತಕರ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ತನಿಖೆ ಮುಂದುವರಿದಿದೆ.

