ಬೈರುತ್ : ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಘೋಷಣೆಯ ಹೊರತಾಗಿಯೂ ಇಸ್ರೇಲ್ ತನ್ನ ಆಕ್ರಮಣಕಾರಿ ದಾಳಿಯನ್ನು ಮುಂದುವರಿಸಿದ್ದು, ಹಿಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ನಯೀಮ್ ಖಾಸಿಮ್ ಅವರ ಅತ್ಯಾಪ್ತ ಸಲಹೆಗಾರನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಮಿಲಿಟರಿ ಗುರುವಾರ ತಿಳಿಸಿದೆ. ಬುಧವಾರ ಇಡೀ ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿಗಳನ್ನು ನಡೆಸುತ್ತಿದ್ದಾಗ, ಬೈರುತ್ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಖಾಸಿಮ್ ಅವರ ವೈಯಕ್ತಿಕ ಕಾರ್ಯದರ್ಶಿ ಮತ್ತು ಸೋದರಳಿಯನಾದ ಅಲಿ ಯೂಸುಫ್ ಹರ್ಷಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ ಎಂದು ಐಡಿಎಫ್ (IDF) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಹರ್ಷಿ ಅವರು ನಯೀಮ್ ಖಾಸಿಮ್ ಅವರ ಕಚೇರಿಯನ್ನು ನಿರ್ವಹಿಸುವಲ್ಲಿ ಮತ್ತು ಭದ್ರತೆಯನ್ನು ಒದಗಿಸುವಲ್ಲಿ ಕೇಂದ್ರ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ.
ಇಸ್ರೇಲ್ನ ಈ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ತನಗೆ ಹಕ್ಕಿದೆ ಎಂದು ಹೇಳಿಕೊಂಡಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯು, ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಉಲ್ಲಂಘಿಸುತ್ತಿದೆ ಎಂದು ಕಿಡಿಕಾರಿದೆ. ಶತ್ರು ದೇಶವು ಒಪ್ಪಂದವನ್ನು ಉಲ್ಲಂಘಿಸುತ್ತಿರುವುದಕ್ಕೆ ಪ್ರತೀಕಾರವಾಗಿ ಗುರುವಾರ ಮುಂಜಾನೆ ಲೆಬನಾನ್ ಗಡಿಗೆ ಹತ್ತಿರವಿರುವ ಇಸ್ರೇಲ್ನ ‘ಮನಾರಾ’ ಎಂಬ ಪ್ರದೇಶದ ಮೇಲೆ ಹಿಜ್ಬುಲ್ಲಾ ಸರಣಿ ರಾಕೆಟ್ ದಾಳಿಗಳನ್ನು ನಡೆಸಿದೆ. ಈ ಬೆಳವಣಿಗೆಯಿಂದಾಗಿ ಲೆಬನಾನ್ ಮತ್ತು ಇಸ್ರೇಲ್ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ತಾರಕಕ್ಕೇರಿದ್ದು, ಕದನ ವಿರಾಮವು ಕೇವಲ ಕಾಗದದ ಮೇಲೆ ಉಳಿಯುವ ಆತಂಕ ಎದುರಾಗಿದೆ.
ಒಂದೇ ದಿನದಲ್ಲಿ ನಡೆದ ಇಸ್ರೇಲ್ನ ಈ ಭೀಕರ ದಾಳಿಗೆ ಲೆಬನಾನ್ನಲ್ಲಿ ಕನಿಷ್ಠ 254 ಜನರು ಬಲಿಯಾಗಿದ್ದು, 1,165 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಭೀಕರ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಲೆಬನಾನ್ ಸರ್ಕಾರವು ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಒಪ್ಪಂದಕ್ಕೂ ಲೆಬನಾನ್ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ಇದೇ ನಿಲುವನ್ನು ಬೆಂಬಲಿಸಿದ್ದು, “ನಾವು ಅಂತಹ ಯಾವುದೇ ಭರವಸೆಯನ್ನು (ಲೆಬನಾನ್ನಲ್ಲಿ ಶಾಂತಿ ಸ್ಥಾಪಿಸುವ ಬಗ್ಗೆ) ನೀಡಿಲ್ಲ” ಎಂದು ಹೇಳುವ ಮೂಲಕ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಆದರೆ, ಅಮೆರಿಕ ಮತ್ತು ಇರಾನ್ ನಡುವಿನ ಈ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನದ ನಿಲುವು ಮಾತ್ರ ಭಿನ್ನವಾಗಿದೆ. ಈ ಒಪ್ಪಂದದಲ್ಲಿ ಲೆಬನಾನ್ ಮೇಲಿನ ದಾಳಿಯನ್ನು ನಿಲ್ಲಿಸುವ ಅಂಶವೂ ಸೇರಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ. ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಒಪ್ಪಂದದ ನಿಯಮಗಳು ಸ್ಪಷ್ಟವಾಗಿವೆ ಎಂದು ಪ್ರತಿಪಾದಿಸಿದ್ದು, ವಾಷಿಂಗ್ಟನ್ ಈಗ ಕದನ ವಿರಾಮ ಬೇಕೋ ಅಥವಾ ಇಸ್ರೇಲ್ ಮೂಲಕ ಯುದ್ಧ ಮುಂದುವರಿಯಬೇಕೋ ಎಂಬ ಆಯ್ಕೆ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

