ಶಿವಮೊಗ್ಗ : ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆ ಹಾಗೂ ಗೇಮ್ಝೋನ್ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಟಿಂಕೂ ಶರ್ಮಾ (26) ಎಂಬ ಯುವಕನನ್ನು ಕೆಫೆ ಮಾಲೀಕ ಇಮ್ರಾನ್ ಕೊಲೆ ಮಾಡಿದ್ದಾನೆ. ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಟಿಂಕೂ, ಹಣ ಕಳವು ಮಾಡುತ್ತಿದ್ದಾನೆ ಎಂಬ ಶಂಕೆಯ ಮೇಲೆ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಬುಧವಾರ ತಡರಾತ್ರಿ ಶುರುವಾದ ವಾಗ್ವಾದ ಗುರುವಾರ ಬೆಳಿಗ್ಗೆ ವಿಕೋಪಕ್ಕೆ ತಿರುಗಿದ್ದು, ಇಮ್ರಾನ್ ಸ್ನೂಕರ್ ಸ್ಟಿಕ್ನಿಂದ ಟಿಂಕೂ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಟಿಂಕೂ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶವದೊಂದಿಗೆ ಕಾರಿನಲ್ಲಿ ಸುತ್ತಾಟ: ಕೊಲೆ ಮಾಡಿದ ನಂತರ ಗಾಬರಿಗೊಂಡ ಇಮ್ರಾನ್, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ತನ್ನ ಹೊಂಡಾ ಸಿಟಿ ಕಾರಿನಲ್ಲಿ (KA-15-M-7022) ತುಂಬಿಸಿಕೊಂಡಿದ್ದಾನೆ. ಶವವನ್ನು ಎಸೆಯಲು ನಿರ್ಜನ ಪ್ರದೇಶಗಳು ಮತ್ತು ರೈಲ್ವೆ ಹಳಿಗಳ ಬಳಿ ಹೋದರೂ, ವಿಫಲನಾಗಿ ದಿನವಿಡೀ ಊರಿನ ವಿವಿಧ ಭಾಗಗಳಲ್ಲಿ ಕಾರಿನಲ್ಲೇ ಶವವಿಟ್ಟುಕೊಂಡು ಸುತ್ತಾಡಿದ್ದಾನೆ. ಅಂತಿಮವಾಗಿ ನೆಹರು ನಗರದಲ್ಲಿರುವ ತನ್ನ ಮನೆಯ ಮುಂದೆ ಕಾರನ್ನು ನಿಲ್ಲಿಸಿದ್ದಾನೆ.
ಪೊಲೀಸರ ಕ್ರಮ: ಕಾರಿನಲ್ಲಿ ಮೃತದೇಹ ಇರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಇಮ್ರಾನ್ ಅನ್ನು ವಶಕ್ಕೆ ಪಡೆದು ಕಾರನ್ನು ಜಪ್ತಿ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಣಕಾಸಿನ ವಿವಾದವೇ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಸಾಗರ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ನಗರದ ಹೃದಯಭಾಗದಲ್ಲೇ ನಡೆದ ಈ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

