ತಿರುವನಂತಪುರಂ: ಕಟಕ್ಕಡ ಸಮೀಪದ ಪೂಜನಾಡಿನಲ್ಲಿ ನಡೆದ ನವಜಾತ ಶಿಶುವಿನ ಭೀಕರ ಹತ್ಯೆಗೆ ಸಂಬಂಧಿಸಿದಂತೆ 21 ವರ್ಷದ ಮಹಿಳೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರಂಭದಲ್ಲಿ ಹೆರಿಗೆಯ ನಂತರದ ಆರೋಗ್ಯದ ತುರ್ತುಸ್ಥಿತಿ ಎಂದು ಬಿಂಬಿತವಾಗಿದ್ದ ಈ ಘಟನೆಯು, ವೈದ್ಯಕೀಯ ಪರೀಕ್ಷೆಯಲ್ಲಿ ಶಿಶುವಿನ ದೇಹದ ಮೇಲೆ ಮಾರಣಾಂತಿಕ ಗಾಯಗಳು ಪತ್ತೆಯಾದ ನಂತರ ಕೊಲೆ ಎಂದು ದೃಢಪಟ್ಟಿದೆ.
ಕಳೆದ ಭಾನುವಾರ (ಏಪ್ರಿಲ್ 5) ಈ ಘಟನೆ ನಡೆದಿದೆ. ಆರೋಪಿ ಶಮ್ನಾ ತನ್ನ ಮನೆಯಲ್ಲಿ ಒಂಟಿಯಾಗಿದ್ದಾಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತನಿಖಾಧಿಕಾರಿಗಳ ಪ್ರಕಾರ, ಮಗು ಹುಟ್ಟಿದ ತಕ್ಷಣವೇ ಶಮ್ನಾ ಬ್ಲೇಡ್ನಿಂದ ಮಗುವಿನ ಗಂಟಲನ್ನು ಸೀಳಿದ್ದಾಳೆ. ಅಷ್ಟೇ ಅಲ್ಲದೆ, ಮಗು ಬದುಕದಂತೆ ತನ್ನ ಕೈಗಳಿಂದ ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆ ಮಾಡಿದ್ದಾಳೆ.
ಹತ್ಯೆಯ ನಂತರ ಕೃತ್ಯವನ್ನು ಮುಚ್ಚಿಡಲು ಶಮ್ನಾ ಮಗುವಿನ ಮೃತದೇಹವನ್ನು ಬೆಡ್ ಶೀಟ್ನಲ್ಲಿ ಸುತ್ತಿ ಹಾಸಿಗೆಯ ಕೆಳಗೆ ಅಡಗಿಸಿಟ್ಟಿದ್ದಳು. ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುವ ಆಕೆಯ ಪತಿ ಅಲ್ತಾಫ್ ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಬಂದಾಗ ಈ ರಹಸ್ಯ ಬಯಲಾಗಿದೆ. ಪತ್ನಿ ತೀವ್ರ ರಕ್ತಸ್ರಾವ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿರುವುದನ್ನು ಕಂಡು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅಲ್ತಾಫ್ ಆಟೋರಿಕ್ಷಾ ವ್ಯವಸ್ಥೆ ಮಾಡಿದ್ದನು.
ಪತ್ತೆಯಾದದ್ದು ಹೇಗೆ?:
ಪತ್ನಿಯನ್ನು ಕರೆದೊಯ್ಯುವಾಗ ಅವಳ ಪಾದರಕ್ಷೆಗಳನ್ನು ತರಲು ಅಲ್ತಾಫ್ ಮಲಗುವ ಕೋಣೆಗೆ ಹೋದಾಗ, ಮಂಚದ ಕೆಳಗೆ ರಕ್ತಸಿಕ್ತವಾದ ಬಂಡಲ್ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ತಕ್ಷಣ ಶಿಶುವನ್ನು ಆಸ್ಪತ್ರೆಗೆ ಸಾಗಿಸಿದರೂ, ಮಗು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು. ಮಗುವಿನ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಕಂಡು ಸಂಶಯಗೊಂಡ ಆಸ್ಪತ್ರೆ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.
ಕೊಲೆಗೆ ಕಾರಣ:
ದಂಪತಿಗೆ ಈಗಾಗಲೇ ಎರಡು ವರ್ಷದ ಒಂದು ಮಗು ಇದ್ದು, ಎರಡನೇ ಮಗುವನ್ನು ಸಾಕಿ ಬೆಳೆಸಲು ತಮಗೆ ಆರ್ಥಿಕವಾಗಿ ಅಸಾಧ್ಯ ಎಂಬ ಭಯದಿಂದ ಈ ಕೃತ್ಯ ಎಸಗಿರುವುದಾಗಿ ಶಮ್ನಾ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಇನ್ನು ಅಲ್ತಾಫ್ ತನಗೆ ಪತ್ನಿಯ ಗರ್ಭಧಾರಣೆಯ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ.
ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ಆರ್ಯಂಕೋಡ್ ಪೊಲೀಸರು ಶಮ್ನಾಳನ್ನು ಬಂಧಿಸಿದ್ದಾರೆ. ಮುಂದಿನ ತನಿಖೆಗಾಗಿ ಪೊಲೀಸರು ಶೀಘ್ರದಲ್ಲೇ ಆಕೆಯನ್ನು ಕಸ್ಟಡಿಗೆ ಪಡೆದು ಕೃತ್ಯ ನಡೆದ ಸ್ಥಳದಲ್ಲಿ ಮಹಜರು ನಡೆಸಲಿದ್ದಾರೆ.

