Monday, April 6, 2026
HomeLOCALUdupi : ಮೂರು ದಿನಗಳ ನಂತರ ಬಾವಿಯಿಂದ ವೃದ್ಧನನ್ನು ಜೀವಂತವಾಗಿ ರಕ್ಷಿಸಲಾಗಿದೆ

Udupi : ಮೂರು ದಿನಗಳ ನಂತರ ಬಾವಿಯಿಂದ ವೃದ್ಧನನ್ನು ಜೀವಂತವಾಗಿ ರಕ್ಷಿಸಲಾಗಿದೆ

ಉಡುಪಿ : ಉಡುಪಿ ಜಿಲ್ಲೆಯ ಆದಿ ಉಡುಪಿಯ ಕಂಬಳಕಟ್ಟೆಯಲ್ಲಿ 62 ವರ್ಷದ ಶ್ರೀನಿವಾಸ ಆಚಾರ್ಯ ಎಂಬುವವರು ಆಕಸ್ಮಿಕವಾಗಿ ಬಾವಿಗೆ ಬಿದ್ದು, ಸುಮಾರು ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಶನಿವಾರ ಸಂಜೆ ತಮ್ಮ ಮನೆಯ ಮುಂದಿರುವ 20 ಅಡಿ ಆಳದ ಬಾವಿಯಿಂದ ಪಂಪ್‌ನ ಹಗ್ಗವನ್ನು ಎಳೆಯಲು ಪ್ರಯತ್ನಿಸುತ್ತಿದ್ದಾಗ, ಹಗ್ಗ ತುಂಡಾಗಿ ಸಮತೋಲನ ತಪ್ಪಿ ಅವರು ಬಾವಿಯೊಳಗೆ ಬಿದ್ದಿದ್ದರು. ಒಂಟಿಯಾಗಿ ವಾಸವಿದ್ದ ಇವರು ಬಾವಿಯೊಳಗೆ ಬಿದ್ದ ವಿಷಯ ಯಾರಿಗೂ ತಿಳಿದಿರಲಿಲ್ಲ, ಅವರು ಸಹಾಯಕ್ಕಾಗಿ ಎಷ್ಟೇ ಕೂಗಿದರೂ ಅಕ್ಕಪಕ್ಕದವರಿಗೆ ಕೇಳಿಸಿರಲಿಲ್ಲ.

ಆದರೆ, ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿನ ವಿಳಂಬವು ಇವರ ಪಾಲಿಗೆ ವರದಾನವಾಯಿತು. ಶ್ರೀನಿವಾಸ ಅವರು ಪರಿಚಯಸ್ಥ ಗಣೇಶ್ ಎಂಬುವವರಿಂದ ಸಿಲಿಂಡರ್ ಪಡೆದಿದ್ದರು. ಅದನ್ನು ಮರಳಿ ಪಡೆಯಲು ಬಂದವರು ಶ್ರೀನಿವಾಸ ಅವರು ಕಾಣಿಸದಿದ್ದಾಗ ಸಂಶಯಗೊಂಡು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬಾವಿಯೊಳಗೆ ಇಣುಕಿ ನೋಡಿದಾಗ ಅವರು ಹಗ್ಗ ಮತ್ತು ಪೈಪ್ ಹಿಡಿದು ನೇತಾಡುತ್ತಿರುವುದು ಕಂಡುಬಂದಿದೆ. ಮೂರು ದಿನಗಳಿಂದ ಆಹಾರವಿಲ್ಲದೆ ಅತ್ಯಂತ ಸುಸ್ತಾಗಿದ್ದ ಅವರನ್ನು ಕಂಡು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.

ವಿಷಯ ತಿಳಿಯುತ್ತಿದ್ದಂತೆಯೇ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹರಸಾಹಸಪಟ್ಟು ಶ್ರೀನಿವಾಸ ಅವರನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳಾದ ಸತೀಶ್, ಅಶ್ವಿನ್ ಸನಿಲ್ ಮತ್ತು ತಂಡದವರು ಬಾವಿಗೆ ಇಳಿದು ವೃದ್ಧನನ್ನು ರಕ್ಷಿಸಿದ್ದಾರೆ. ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕೇವಲ ಒಂದು ಹಗ್ಗ ಮತ್ತು ಪೈಪ್ ಹಿಡಿದು ಮೂರು ದಿನಗಳ ಕಾಲ ನೀರಿನಲ್ಲೇ ಕಳೆದ ಇವರ ಬದುಕುಳಿಯುವಿಕೆ ನಿಜಕ್ಕೂ ಒಂದು ಪವಾಡವೇ ಸರಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!