ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದಲ್ಲಿ ವಾಸವಾಗಿದ್ದ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಸಂಬಂಧ ಕೊಣಾಜೆ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ. ನಾಪತ್ತೆಯಾದ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಕೋಟೆ ಗಂಗೂರು ನಿವಾಸಿ ಮೊಹಮ್ಮದ್ ಅರ್ಷದ್ (30) ಎಂದು ಗುರುತಿಸಲಾಗಿದೆ. ಇವರು ಕಳೆದ ಕೆಲವು ಸಮಯದಿಂದ ನರಿಂಗಾನದ ಕಲ್ಲರಕೋಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಘಟನೆಯ ವಿವರದ ಪ್ರಕಾರ, ಮಾರ್ಚ್ 23 ರಂದು ಕೆಲಸ ಮುಗಿಸಿ ಸಂಜೆ 4 ಗಂಟೆಗೆ ಮನೆಗೆ ಬಂದಿದ್ದ ಅರ್ಷದ್, ಶಿವಮೊಗ್ಗದಲ್ಲಿರುವ ತನ್ನ ಪುತ್ರಿಯನ್ನು ನೋಡಲು ಹೋಗುವುದಾಗಿ ಪತ್ನಿಯ ಬಳಿ ತಿಳಿಸಿದ್ದರು. ಅಂದು ರಾತ್ರಿ 8 ಗಂಟೆಗೆ ಮನೆಯಿಂದ ಹೊರಟಿದ್ದ ಅವರು, ಶಿವಮೊಗ್ಗ ತಲುಪಿದ ತಕ್ಷಣ ಪತ್ನಿಗೆ ಫೋನ್ ಮಾಡುವುದಾಗಿ ಹೇಳಿದ್ದರು. ಆದರೆ, ಮಾರ್ಚ್ 24 ರಂದು ಬೆಳಗ್ಗೆಯಾದರೂ ಅರ್ಷದ್ ಅವರಿಂದ ಯಾವುದೇ ಕರೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪತ್ನಿ ಕರೆ ಮಾಡಿದಾಗ ಅರ್ಷದ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಬರುತ್ತಿತ್ತು.
ಅಂತಿಮವಾಗಿ ಪತ್ನಿಯು ಶಿವಮೊಗ್ಗದಲ್ಲಿರುವ ತನ್ನ ತಾಯಿ ಮನೆಗೆ ಕರೆ ಮಾಡಿ ವಿಚಾರಿಸಿದಾಗ, ಅರ್ಷದ್ ಅಲ್ಲಿಗೂ ತಲುಪಿಲ್ಲ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಪುತ್ರಿಯನ್ನು ಕಾಣಲು ಹೋದ ಪತಿ ದಾರಿ ಮಧ್ಯೆಯೇ ನಾಪತ್ತೆಯಾಗಿರುವುದು ಕುಟುಂಬಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅರ್ಷದ್ ಪತ್ನಿ ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅರ್ಷದ್ ಅವರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಲುಕೌಟ್ ನೋಟಿಸ್ ಹೊರಡಿಸಿದ್ದಾರೆ.

