ಬೆಂಗಳೂರು : ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಸುಂದರಪಾಳ್ಯದ ಬಳಿ ಸ್ಕೂಟರ್ನಲ್ಲಿ ಮಾರಕಾಸ್ತ್ರ ಹಿಡಿದು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಬ್ ಇನ್ಸ್ಪೆಕ್ಟರ್ ಸಚಿನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆಗಿಳಿದಿತ್ತು. ಪೊಲೀಸರು ಆತನ ಸ್ಕೂಟರ್ ಬೆನ್ನಟ್ಟಿ ತಡೆದರೂ, ಆತ ಸೋಮಸುಂದರಪಾಳ್ಯ ಕೆರೆಯ ನಿರ್ಜನ ಪ್ರದೇಶದ ಕಡೆಗೆ ಅತಿವೇಗವಾಗಿ ವಾಹನ ಚಲಾಯಿಸಿ ಎಸ್ಕೇಪ್ ಆಗಲು ನೋಡಿದ್ದಾನೆ. ತಕ್ಷಣವೇ ಬೆನ್ನಟ್ಟಿದ ಪೊಲೀಸರು ಆತನನ್ನು ಸುತ್ತುವರೆದಾಗ, ತನ್ನ ಬಳಿಯಿದ್ದ ಉದ್ದನೆಯ ಕತ್ತಿಯಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ಈ ವೇಳೆ ಶರಣಾಗುವಂತೆ ಎಚ್ಚರಿಕೆ ನೀಡಿ ಪಿಎಸ್ಐ ಸಚಿನ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆದರೂ ಬಗ್ಗದ ಆರೋಪಿ, ತಪ್ಪಿಸಿಕೊಳ್ಳುವ ಭರದಲ್ಲಿ ಕಾನ್ಸ್ಟೇಬಲ್ ಸಂದೀಪ್ ಕಾಂಬ್ಳೆ ಮೇಲೆ ಹಲ್ಲೆ ನಡೆಸಿ ಬಳಿಕ ಪಿಎಸ್ಐ ಮೇಲೆಯೇ ದಾಳಿಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪಿಎಸ್ಐ ಸಚಿನ್ ಅವರು ಆರೋಪಿಯ ಬಲಗಾಲಿಗೆ ಗುಂಡು ಹೊಡೆದು ಆತನನ್ನು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ಕಾನ್ಸ್ಟೇಬಲ್ ಸಂದೀಪ್ ಹಾಗೂ ಗುಂಡೇಟು ತಿಂದ ಆರೋಪಿ ಜೀಶಾನ್ ಇಬ್ಬರನ್ನೂ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಲೆಕ್ಟ್ರಾನಿಕ್ ಉಪವಿಭಾಗದ ಡಿಸಿಪಿ ನಾರಾಯಣ್ ಮಾಹಿತಿ ನೀಡಿದ್ದಾರೆ.
ಆರೋಪಿ ಜೀಶಾನ್ ಬೇಗೂರು ಠಾಣೆಯ ದರೋಡೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಲ್ಲದೆ, ಇತ್ತೀಚೆಗೆ ಮಡಿವಾಳದಲ್ಲಿ ನಡೆದಿದ್ದ ಸುಹೈಲ್ ಕೊಲೆ ಪ್ರಕರಣದ ಆರೋಪಿಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ್ದ ಎನ್ನಲಾಗಿದೆ. ಸದ್ಯ ಈತನ ವಿರುದ್ಧ ಆರ್ಮ್ಸ್ ಆ್ಯಕ್ಟ್ ಅಡಿ ಕೇಸ್ ದಾಖಲಾಗಿದ್ದು, ಸ್ಥಳಕ್ಕೆ ಇನ್ಸ್ಪೆಕ್ಟರ್ ಮಂಜುನಾಥ್ ಆರ್.ವಿ. ಹಾಗೂ ಫೋರೆನ್ಸಿಕ್ (SOCO) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇದನ್ನು ಓದಿ : Kozhikode : ಸಬ್-ಇನ್ಸ್ಪೆಕ್ಟರ್ ಸೋಗಿನಲ್ಲಿ ಡ್ರಗ್ಸ್ ಜಪ್ತಿ ಮಾಡಿ ಮಾರುತ್ತಿದ್ದ ಖದೀಮ ರೋಜಿತ್ ಅರೆಸ್ಟ್!