ಉಡುಪಿ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ 5.73 ಲಕ್ಷ ರೂಪಾಯಿ ಹಾಗೂ ಪಾಸ್ಪೋರ್ಟ್ ಪಡೆದು ವಂಚಿಸಿರುವ ಕೃತ್ಯ ಬೆಳಕಿಗೆ ಬಂದಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುುತ್ತೂರು ಸುಬ್ರಹ್ಮಣ್ಯ ನಗರ ನಿವಾಸಿ ಪುಷ್ಪರಾಜ್ ಶೆಟ್ಟಿ ವಂಚನೆಗೊಳಗಾದ ವ್ಯಕ್ತಿ. ಇವರು ಕೆಲಸ ಹುಡುಕುತ್ತಿದ್ದಾಗ ಮೊದಲನೇ ಆರೋಪಿ ಆಶ್ಲೆ ಕರ್ನೇಲಿಯೋ ಎಂಬಾಕೆ ಸಂಪರ್ಕಿಸಿ, ಯು.ಕೆ.ಯಲ್ಲಿ ಹೌಸ್ ಕೀಪಿಂಗ್ ಸೂಪರ್ವೈಸರ್ ಕೆಲಸ ಖಾಲಿ ಇದೆ ಎಂದು ನಂಬಿಸಿದ್ದಳು.
ಹಂತ ಹಂತವಾಗಿ ಹಣ ಲೂಟಿ:
ಆಕೆಯ ಸೂಚನೆಯಂತೆ ಎರಡನೇ ಆರೋಪಿ ಸವಿತಾ ಎಂಬಾಕೆಯನ್ನು ಸಂಪರ್ಕಿಸಿದಾಗ ವೀಸಾ ಪ್ರೊಸೆಸಿಂಗ್ಗೆ ಹಣ ಪಾವತಿಸಲು ತಿಳಿಸಲಾಗಿತ್ತು. ಅದರಂತೆ ಸವಿತಾಳ ಬ್ಯಾಂಕ್ ಖಾತೆಗೆ 2 ಲಕ್ಷ ರೂ. ಜಮಾ ಮಾಡಲಾಗಿತ್ತು. ನಂತರ ಮೂರನೇ ಆರೋಪಿ ಪ್ರಕೃತಿ ಹಾಗೂ ನಾಲ್ಕನೇ ಆರೋಪಿ ಪ್ರಶಾಂತ್ ಎಂಬುವವರು ಮೆಡಿಕಲ್ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಮತ್ತು ಎಂಬಸಿ ಪ್ರೊಸೆಸಿಂಗ್ ಹೆಸರಿನಲ್ಲಿ ಒಟ್ಟು 5,73,000 ರೂ. ಹಾಗೂ ಪಾಸ್ಪೋರ್ಟ್ ಪಡೆದುಕೊಂಡಿದ್ದರು.
ಫೋನ್ ಸ್ವಿಚ್ ಆಫ್ ಮಾಡಿ ಪರಾರಿ:
ಹಣ ಪಡೆದ ಬಳಿಕ ವೀಸಾ ತಿರಸ್ಕೃತವಾಗಿದೆ ಎಂದು ಸುಳ್ಳು ಹೇಳಿದ ಆರೋಪಿಗಳು, ಹಣ ಹಾಗೂ ಪಾಸ್ಪೋರ್ಟ್ ವಾಪಸ್ ನೀಡುವುದಾಗಿ ನಂಬಿಸಿ ಕರೆಯನ್ನು ಕಡಿತಗೊಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ವಂಚನೆಗೊಳಗಾದದ್ದು ತಿಳಿಯುತ್ತಿದ್ದಂತೆ ಪುಷ್ಪರಾಜ್ ಶೆಟ್ಟಿ ನೀಡಿದ ದೂರಿನಂತೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನು ಓದಿ : Manipal : ಅಕ್ರಮ ಬಂಡೆ ಸ್ಫೋಟ ಪ್ರಕರಣದ ಇಬ್ಬರು ಖತರ್ನಾಕ್ ಆರೋಪಿಗಳು ಬಂಧನ!