ಹೈದರಾಬಾದ್ : ಹೈದರಾಬಾದ್ನಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯು ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಕೌಟುಂಬಿಕ ಕಲಹ ಮತ್ತು ಪತಿಯ ಎರಡನೇ ಮದುವೆಯ ವಿಚಾರದಿಂದ ನೊಂದ 29 ವರ್ಷದ ಶ್ರವಂತಿ ಎಂಬ ಮಹಿಳೆ, ತನ್ನ ಇಬ್ಬರು ಪುಟ್ಟ ಮಕ್ಕಳಾದ ಕಾರ್ತಿಕ್ (12) ಮತ್ತು ಕೌಶಿಕ್ (10) ಅವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 13 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದ ಈ ದಂಪತಿಗಳ ನಡುವೆ, ಪತಿ ಪ್ರವೀಣ್ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂಬ ವಿಷಯವಾಗಿ ಪದೇ ಪದೇ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಜಗಳದಿಂದ ಬೇಸತ್ತು ವಾರಂಗಲ್ನಲ್ಲಿದ್ದ ತನ್ನ ತಂದೆ-ತಾಯಿ ಮನೆಗೆ ಹೋಗಿದ್ದ ಶ್ರವಂತಿ ಅವರನ್ನು ಕುಟುಂಬದ ಹಿರಿಯರು ಸಮಾಧಾನಪಡಿಸಿ ಸೋಮವಾರ ರಾತ್ರಿಯಷ್ಟೇ ಹೈದರಾಬಾದ್ಗೆ ಕಳುಹಿಸಿಕೊಟ್ಟಿದ್ದರು. ಆದರೆ ಮಂಗಳವಾರ ಮಧ್ಯಾಹ್ನ ಪ್ರವೀಣ್ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಪ್ರಯತ್ನಿಸಿದರೂ ಪ್ರತಿಕ್ರಿಯೆ ಬಾರದಿದ್ದಾಗ ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಒಳಹೋದಾಗ, ಶ್ರವಂತಿ ಮತ್ತು ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಈ ದೃಶ್ಯ ಕಂಡು ಇಡೀ ಬಡಾವಣೆಯೇ ಕಣ್ಣೀರು ಹಾಕಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶ್ರವಂತಿ ಅವರು ಮಕ್ಕಳಿಗೆ ನೇಣು ಬಿಗಿದು ನಂತರ ತಾವೂ ಅದೇ ದಾರಿ ಹಿಡಿದಿರಬಹುದು ಎಂದು ಶಂಕಿಸಲಾಗಿದೆ. ಪತಿ ಪ್ರವೀಣ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಈ ಭೀಕರ ಘಟನೆಯ ಹಿಂದಿನ ನಿಖರ ಕಾರಣಗಳು ಹೊರಬೀಳಲಿವೆ.

