ನವದೆಹಲಿ : ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧವು ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸುತ್ತಿದ್ದು, ಈ ಸಂಘರ್ಷದ ಹಾದಿಯಲ್ಲಿ ತನ್ನ ಪ್ರಜೆಗಳನ್ನು ಕಳೆದುಕೊಂಡ ಏಕೈಕ ರಾಷ್ಟ್ರ ಭಾರತವಾಗಿದೆ ಎಂಬ ಆಘಾತಕಾರಿ ವಿಷಯವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಬಹಿರಂಗಪಡಿಸಿದೆ. ಎನ್ಡಿಟಿವಿ ವರದಿಯ ಪ್ರಕಾರ, ಬ್ರಿಟನ್ನಲ್ಲಿ ನಡೆದ 60ಕ್ಕೂ ಹೆಚ್ಚು ರಾಷ್ಟ್ರಗಳ ಮಹತ್ವದ ಸಭೆಯಲ್ಲಿ ಭಾರತವು ಈ ಕಳವಳಕಾರಿ ಮಾಹಿತಿಯನ್ನು ಹಂಚಿಕೊಂಡಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಅವರು ಈ ಸಭೆಯಲ್ಲಿ ಪಾಲ್ಗೊಂಡು, ಇರಾನ್ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಕೂಡಲೇ ಮುಕ್ತಗೊಳಿಸುವಂತೆ ಕಟ್ಟುನಿಟ್ಟಿನ ಆಗ್ರಹ ಮಾಡಿದ್ದಾರೆ. ಈ ಜಲಸಂಧಿಯಲ್ಲಿ ನಡೆದ ದಾಳಿಗಳಲ್ಲಿ ಇದುವರೆಗೆ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಟ್ಟಾರೆಯಾಗಿ ಗಲ್ಫ್ ವಲಯದ ಸಂಘರ್ಷದಲ್ಲಿ ಈವರೆಗೆ ಎಂಟು ಭಾರತೀಯರು ಪ್ರಾಣ ಕಳೆದುಕೊಂಡಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಪೂರೈಕೆಯ ನಾಳದಂತಿದ್ದು, ಇದರ ಮುಚ್ಚುವಿಕೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿವೆ. ಭಾರತವು ತನ್ನ ಕಚ್ಚಾ ತೈಲದ ಬಹುಪಾಲು ಆಮದಿಗಾಗಿ ಈ ಮಾರ್ಗವನ್ನೇ ನೆಚ್ಚಿಕೊಂಡಿರುವುದರಿಂದ, ಈ ಬಿಕ್ಕಟ್ಟು ದೇಶದ ಇಂಧನ ಭದ್ರತೆ ಮತ್ತು ಆರ್ಥಿಕತೆಯ ಮೇಲೆ ನೇರವಾದ ಪೆಟ್ಟು ನೀಡಿದೆ. ಮುಕ್ತ ನೌಕಾಯಾನಕ್ಕೆ ಅಡ್ಡಿಪಡಿಸುವುದು ಅಂತರಾಷ್ಟ್ರೀಯ ಆರ್ಥಿಕತೆಗೆ ಮಾರಕ ಎಂದು ಭಾರತ ಎಚ್ಚರಿಸಿದೆ.
ಸದ್ಯ ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 1 ಕೋಟಿ ಭಾರತೀಯರು ವಾಸಿಸುತ್ತಿದ್ದು, ಅವರ ಸುರಕ್ಷತೆಯ ಬಗ್ಗೆ ಭಾರತ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಈಗಾಗಲೇ ಇರಾನ್ನ ಭೂಗಡಿ ಮೂಲಕ ಅಜೆರ್ಬೈಜಾನ್ ಮಾರ್ಗವಾಗಿ 204 ಭಾರತೀಯರನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದ್ದು, ಉಳಿದವರ ಸುರಕ್ಷತೆಗಾಗಿ ರಾಯಭಾರ ಕಚೇರಿಗಳು ನಿರಂತರ ಸಂಪರ್ಕದಲ್ಲಿವೆ. ಅಜೆರ್ಬೈಜಾನ್ ಸರ್ಕಾರದ ಬೆಂಬಲಕ್ಕೆ ಜೈಸ್ವಾಲ್ ಧನ್ಯವಾದ ಅರ್ಪಿಸಿದರು.

