NCERT ಇತ್ತೀಚೆಗೆ ಬಿಡುಗಡೆ ಮಾಡಿದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ “ನ್ಯಾಯಾಂಗದಲ್ಲಿ ಭ್ರಷ್ಟಾಚಾರ” ಎಂಬ ಅಧ್ಯಾಯ ಸೇರ್ಪಡೆಗೊಂಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಪಠ್ಯಪುಸ್ತಕ ನಿಷೇಧಿಸಿ NCERT ನಿರ್ದೇಶಕರಿಗೆ ಕಠಿಣ ನೋಟಿಸ್ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರ ಪೀಠ ಮಂಗಳವಾರ ವಿಚಾರಣೆ ನಡೆಸಿ, ಈ ಅಧ್ಯಾಯ ಸೇರ್ಪಡೆ “ಆಳವಾಗಿ ಬೇರೂರಿರುವ ಪಿತೂರಿಯ ಭಾಗ” ಎಂದು ಕಟುವಾಗಿ ಹೇಳಿ ಇದಕ್ಕೆ ಹೊಣೆಗಾರರನ್ನು ಕಾನೂನಿನ ಮುಂದೆ ತರಬೇಕು ಎಂದು ಸ್ಪಷ್ಟಪಡಿಸಿತು.
ಶಾಲಾ ಶಿಕ್ಷಣ ಇಲಾಖೆ ಮತ್ತು NCERT ನಿರ್ದೇಶಕ ಡಾ. ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ನ್ಯಾಯಾಲಯ ನಿಂದನೆ ಆರೋಪದಡಿ ನೋಟಿಸ್ ಜಾರಿ ಮಾಡಲಾಗಿದೆ. ಕ್ರಮ ಕೈಗೊಳ್ಳದಿರಲು ಕಾರಣ ತಿಳಿಸುವಂತೆ ನ್ಯಾಯಾಲಯ ಸೂಚಿಸಿದೆ. ಆಕ್ಷೇಪಾರ್ಹ ಅಧ್ಯಾಯ ಬರೆದ ರಾಷ್ಟ್ರೀಯ ಪಠ್ಯಕ್ರಮ ಮಂಡಳಿ ಸದಸ್ಯರ ವಿವರಗಳನ್ನೂ ನ್ಯಾಯಾಲಯ ಕೇಳಿದೆ.
ಪಠ್ಯಪುಸ್ತಕದ ಉತ್ಪಾದನೆ ಮತ್ತು ವಿತರಣೆಯ ಮೇಲೆ ಸಂಪೂರ್ಣ ನಿಷೇಧ ಹೇರಿದ ನ್ಯಾಯಾಲಯ, NCERT ಮತ್ತು ಕೇಂದ್ರ-ರಾಜ್ಯ ಶಿಕ್ಷಣ ಇಲಾಖೆಗಳಿಗೆ ಪುಸ್ತಕದ ಎಲ್ಲ ಡಿಜಿಟಲ್ ಮತ್ತು ಸಾರ್ವಜನಿಕ ವೇದಿಕೆಯ ಪ್ರತಿಗಳನ್ನು ತಕ್ಷಣ ತೆಗೆದು ಹಾಕುವಂತೆ ಆದೇಶಿಸಿದೆ.
ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ನ್ಯಾಯಾಂಗ ಸಂಸ್ಥೆಯನ್ನು ಅವಹೇಳನ ಮಾಡುವ ವಿಷಯ ಸೇರಿಸಿರುವುದು ಗಂಭೀರ ಪ್ರಶ್ನೆ ಎಬ್ಬಿಸಿದ್ದು, ಶಿಕ್ಷಣ ತಜ್ಞರು ಮತ್ತು ಕಾನೂನು ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. NCERT ಪಠ್ಯಪುಸ್ತಕ ರಚನಾ ಪ್ರಕ್ರಿಯೆ ಮತ್ತು ಗುಣಮಟ್ಟ ನಿಯಂತ್ರಣ ಮೇಲೆ ಪ್ರಶ್ನೆ ಎದ್ದಿದ್ದು ಈ ಪ್ರಕರಣ ಸಂಸತ್ ಚರ್ಚೆಗೂ ಕಾರಣವಾಗಬಹುದು ಎಂದು ರಾಜಕೀಯ ವಲಯ ಅಭಿಪ್ರಾಯಪಡುತ್ತಿದೆ.

