Wednesday, April 8, 2026
Homeತಾಜಾ ಸುದ್ದಿTamil Nadu Lockup Death Verdict : 9 ಪೊಲೀಸ್ ಗಲ್ಲಿಗೇರಲು ಕಾರಣರಾದ ಪ್ರಮುಖ ಸಾಕ್ಷಿ...

Tamil Nadu Lockup Death Verdict : 9 ಪೊಲೀಸ್ ಗಲ್ಲಿಗೇರಲು ಕಾರಣರಾದ ಪ್ರಮುಖ ಸಾಕ್ಷಿ ಹೆಡ್ ಕಾನ್ಸ್ಟೇಬಲ್ ರೇವತಿ

ತಮಿಳುನಾಡು :  ತಮಿಳುನಾಡಿನ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿದ್ದ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಕಸ್ಟಡಿಯಲ್ ಡೆತ್ ಪ್ರಕರಣದಲ್ಲಿ ಮಧುರೈ ಜಿಲ್ಲಾ ನ್ಯಾಯಾಲಯವು ಇಂದು ಐತಿಹಾಸಿಕ ತೀರ್ಪು ನೀಡಿದೆ. ಅಮಾನವೀಯವಾಗಿ ತಂದೆ-ಮಗನನ್ನು ಹತ್ಯೆ ಮಾಡಿದ ಒಟ್ಟು 9 ಮಂದಿ ಪೊಲೀಸರಿಗೆ ನ್ಯಾಯಾಲಯವು ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಆದೇಶಿಸಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನಡೆದ ಈ ಘೋರ ಕೃತ್ಯವು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಮಧುರೈ ನ್ಯಾಯಾಧೀಶರಾದ ಜಿ. ಮುತ್ತುಕುಮಾರನ್ ಅವರು ಇದನ್ನು “ಅಪರೂಪದಲ್ಲಿಯೇ ಅಪರೂಪದ” ಪ್ರಕರಣ ಎಂದು ಪರಿಗಣಿಸಿ ಈ ಕಠಿಣ ಶಿಕ್ಷೆ ಘೋಷಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಲು ಸಂಚು ರೂಪಿಸಿದ್ದರು. ಆದರೆ ಅದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸ್ಟೆಬಲ್ ರೇವತಿ ಅವರು ತೋರಿದ ಧೈರ್ಯವು ಈ 9 ಪೊಲೀಸರ ಕುತ್ತಿಗೆಗೆ ಉರುಳಾಗಿದೆ. ಠಾಣೆಯೊಳಗೆ ತಂದೆ-ಮಗನ ಮೇಲೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ್ದನ್ನು ರೇವತಿ ಅವರು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಧೈರ್ಯವಾಗಿ ವಿವರಿಸಿದ್ದರು. “ಇಡೀ ರಾತ್ರಿ ಠಾಣೆಯಲ್ಲಿ ರಕ್ತ ಹರಿಯುತ್ತಿತ್ತು, ಪೊಲೀಸರು ಲಾಠಿಗಳಿಂದ ಬರ್ಬರವಾಗಿ ಹಲ್ಲೆ ನಡೆಸಿದ್ದರು” ಎಂದು ಅವರು ಕಣ್ಣೀರು ಹಾಕುತ್ತಾ ಸತ್ಯ ಬಿಚ್ಚಿಟ್ಟಿದ್ದರು. ಸಹೋದ್ಯೋಗಿಗಳ ವಿರುದ್ಧವೇ ಸತ್ಯ ಹೇಳಲು ಅವರು ತೋರಿದ ಆ ಒಂದು ಧೈರ್ಯವೇ ಇಂದು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಟ್ಟಿದೆ.

ಸಿಬಿಐ ಸಲ್ಲಿಸಿದ್ದ ಸುಮಾರು 2,427 ಪುಟಗಳ ಬೃಹತ್ ಚಾರ್ಜ್‌ಶೀಟ್‌ನಲ್ಲಿ ಇನ್ಸ್‌ಪೆಕ್ಟರ್ ಶ್ರೀಧರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ರಘು ಗಣೇಶ್ ಮತ್ತು ಬಾಲಕೃಷ್ಣನ್ ಸೇರಿದಂತೆ 9 ಪೊಲೀಸರ ಕ್ರೌರ್ಯವನ್ನು ಎಳೆಎಳೆಯಾಗಿ ಬಿಡಿಸಿಡಲಾಗಿತ್ತು. ಈ ತೀರ್ಪು ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಸರ್ಕಾರಿ ಅಧಿಕಾರಿಗಳಿಗೆ ಮತ್ತು ರಕ್ಷಕರೇ ಭಕ್ಷಕರಾಗುವ ಪೊಲೀಸ್ ವ್ಯವಸ್ಥೆಗೆ ಒಂದು ದೊಡ್ಡ ಎಚ್ಚರಿಕೆಯಾಗಿದೆ. ಸುದೀರ್ಘ ಹೋರಾಟದ ನಂತರ ಜಯರಾಜ್-ಬೆನ್ನಿಕ್ಸ್ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!