ತೀರ್ಥಹಳ್ಳಿ : ತೀರ್ಥಹಳ್ಳಿಯ ಸೀಬಿನಕೆರೆ ನಿವಾಸಿ ಅಕ್ಷಯ್ (26) ಎಂಬ ಯುವಕ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ನದಿಗೆ ಈಜಲು ತೆರಳಿದ್ದ ಅಕ್ಷಯ್, ನದಿತಟದ ಕಲ್ಲು ಬಂಡೆಯ ಮೇಲೆ ತನ್ನ ಬಟ್ಟೆ, ಚಪ್ಪಲಿ ಮತ್ತು ಮೊಬೈಲ್ ಇಟ್ಟು ನೀರಿಗೆ ಇಳಿದಿದ್ದರು. ಆದರೆ ಬಹಳ ಸಮಯವಾದರೂ ಅವರು ವಾಪಸ್ ಬಾರದಿದ್ದಾಗ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಬುಧವಾರ ಬೆಳಿಗ್ಗೆ ನದಿಯಲ್ಲಿ ತೀವ್ರ ಶೋಧ ಕಾರ್ಯ ನಡೆಸಿತು. ಯುವಕ ನೀರಿಗೆ ಇಳಿದಿದ್ದ ಸ್ಥಳದ ಸಮೀಪದಲ್ಲೇ ಅಕ್ಷಯ್ ಅವರ ಮೃತದೇಹ ಪತ್ತೆಯಾಗಿದೆ. ಅಕ್ಷಯ್ ಅವರು ಬಳಸುತ್ತಿದ್ದ ಮೊಬೈಲ್ ಸಿಮ್ ಕಾರ್ಡ್ ಬೇರೆಯವರ ಹೆಸರಿನಲ್ಲಿದೆ ಎಂಬ ಅನುಮಾನಾಸ್ಪದ ಮಾಹಿತಿ ಲಭ್ಯವಾಗಿದ್ದು, ತೀರ್ಥಹಳ್ಳಿ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಾಗಿದೆ.

