HomeLOCALKota : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಕಾರು ಅಪಘಾತ; ರಸ್ತೆ ದಾಟುತ್ತಿದ್ದ ಬ್ರಹ್ಮಾವರದ ಸತೀಶ್...

Kota : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಕಾರು ಅಪಘಾತ; ರಸ್ತೆ ದಾಟುತ್ತಿದ್ದ ಬ್ರಹ್ಮಾವರದ ಸತೀಶ್ ಆಚಾರ್ಯ ಸಾವು!

ಕೋಟ : ಉಡುಪಿ ಜಿಲ್ಲೆಯ ಕೋಟ ಸರ್ಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ಸಂಜೆ ಈ ಭೀಕರ ದುರಂತ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯನ್ನು ಬ್ರಹ್ಮಾವರ ತಾಲೂಕಿನ ಅರೂರು ಮೂಲದ ಸತೀಶ್ ಆಚಾರ್ಯ (45) ಎಂದು ಗುರುತಿಸಲಾಗಿದೆ. ಸತೀಶ್ ಆಚಾರ್ಯ ಅವರು ರವಿವಾರ ಸಂಜೆ ಕೋಟದ ಪ್ರಸಿದ್ಧ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ಪೂಜೆ ಮುಗಿಸಿ ಅಲ್ಲಿಂದ ಹಾಡಿಕೇರೆ ಕಡೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿಯನ್ನು ಕಾಲ್ನಡಿಗೆಯ ಮೂಲಕ ದಾಟುತ್ತಿದ್ದರು. ಈ ವೇಳೆ ಕುಂದಾಪುರ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆ ದಾಟುತ್ತಿದ್ದ ಸತೀಶ್ ಅವರಿಗೆ ಭೀಕರವಾಗಿ ಢಿಕ್ಕಿ ಹೊಡೆದಿದೆ.

ಕಾರು ಅಪ್ಪಳಿಸಿದ ರಭಸಕ್ಕೆ ಸತೀಶ್ ಆಚಾರ್ಯ ಅವರು ರಸ್ತೆಗೆ ಬಿದ್ದು ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದವು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣವೇ ರಕ್ಷಿಸಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ದಾರಿ ಮಧ್ಯೆಯಲ್ಲೇ ಸತೀಶ್ ಆಚಾರ್ಯ ಅವರು ಚಿಕಿತ್ಸೆ ಸಿಗುವ ಮುನ್ನವೇ ದಾರುಣವಾಗಿ ಕೊನೆಯುಸಿರೆಳೆದಿದ್ದಾರೆ. ದೇವರ ದರ್ಶನ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಹೆದ್ದಾರಿಯಲ್ಲಿ ಜವರಾಯನಂತೆ ಬಂದ ಕಾರು ವ್ಯಕ್ತಿಯ ಪ್ರಾಣವನ್ನೇ ಹೀರಿದೆ. ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments