ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರದ ಬೊಳ್ಳೂರುಬೈಲು ಪ್ರದೇಶದಲ್ಲಿ ಈ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಆಗಸ್ಟ್ 18ರ ಮಂಗಳವಾರ ಬೆಳಗಿನ ಜಾವ ಸುಮಾರು 4:45ರ ವೇಳೆಗೆ ಖಚಿತ ಮಾಹಿತಿಯ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ವಾಹನ ಕಂಡ ಕೂಡಲೇ ಮರಳುಗಾರಿಕೆಯಲ್ಲಿ ತೊಡಗಿದ್ದವರು ಪರಾರಿಯಾಗಲು ಯತ್ನಿಸಿದ್ದು, ಓರ್ವ ಆರೋಪಿ ಮಹಮ್ಮದ್ ಸುಹೈಲ್ ಎಂಬಾತನನ್ನು ಪೊಲೀಸರು ಚೇಸ್ ಮಾಡಿ ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳು ಕತ್ತಲಲ್ಲಿ ಪರಾರಿಯಾಗಿದ್ದಾರೆ.
ಬಂಧಿತನನ್ನು ವಿಚಾರಣೆಗೊಳಪಡಿಸಿದಾಗ ಪರಾರಿಯಾದ ಟಿಪ್ಪರ್ ಚಾಲಕ ಇಬ್ರಾಹಿಂ ಹಾಗೂ ಮರಳು ತುಂಬಿಸುತ್ತಿದ್ದ ಪುನೀತ್ ಎಂಬುವರ ಹೆಸರುಗಳು ಬಯಲಾಗಿವೆ. ಮರಳು ಸಂಗ್ರಹ ಮತ್ತು ಸಾಗಾಟಕ್ಕೆ ಯಾವುದೇ ಅಧಿಕೃತ ಪರವಾನಗಿ ಇಲ್ಲದಿರುವುದು ಪತ್ತೆಯಾಗಿದೆ. ಸ್ಥಳದಲ್ಲಿದ್ದ 10,000 ರೂ. ಮೌಲ್ಯದ ಮರಳು ಸಹಿತ KA-19-AA-2826 ನಂಬರಿನ ಟಿಪ್ಪರ್ (ಅಂದಾಜು ಮೌಲ್ಯ 3.50 ಲಕ್ಷ ರೂ.) ಹಾಗೂ 20 ಪ್ಲಾಸ್ಟಿಕ್ ಬುಟ್ಟಿಯಷ್ಟು ಮರಳು ತುಂಬಿದ್ದ KA-18-B-1236 ನಂಬರಿನ ಟಿಪ್ಪರ್ (ಅಂದಾಜು ಮೌಲ್ಯ 4 ಲಕ್ಷ ರೂ.) ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 89/2026 ರಂತೆ BNS-2023 ರ ಕಲಂ 303(2) ಜೊತೆಗೆ 3(5), MMDR Act ಹಾಗೂ KMMCR-1994 ರ ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.