ಮಂಗಳೂರು, ಆಗಸ್ಟ್ 26 : ಗ್ರಾಹಕರೊಬ್ಬರು ತಮಗೆ ಬಡಿಸಿದ ಸಾಂಬಾರಿನಲ್ಲಿ ಜಿರಳೆ ಬಿದ್ದಿರುವುದನ್ನು ಕಂಡು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಜಿಲ್ಲಾ ಆಹಾರ ಸುರಕ್ಷತಾ ನಿಯೋಜಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರು ತಮ್ಮ ಚಾಲಕನೊಂದಿಗೆ ಮಧ್ಯಾಹ್ನ 1:30 ರ ಸುಮಾರಿಗೆ ತೊಕ್ಕೊಟ್ಟಿನ ಬೃಂದಾವನ ಹೋಟೆಲ್ಗೆ ಭೇಟಿ ನೀಡಿದ್ದಾರೆ. ತಕ್ಷಣ ಹೋಟೆಲ್ ಶಟರ್ ಎಳೆದು ಅಡುಗೆ ಕೋಣೆಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ಹೋಟೆಲ್ನ ಅಡುಗೆ ಕೋಣೆಯಲ್ಲಿ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸರಿಯಾದ ವ್ಯವಸ್ಥೆ ಇಲ್ಲದಿರುವುದು ಹಾಗೂ ಬೇಕಾಬಿಟ್ಟಿಯಾಗಿ ಪದಾರ್ಥಗಳನ್ನು ರಾಶಿ ಹಾಕಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಅಸಮರ್ಪಕವಾಗಿ ಸಂಗ್ರಹಿಸಲಾಗಿದ್ದ ಆಹಾರ ಪದಾರ್ಥಗಳನ್ನು ತಕ್ಷಣ ತೆರವುಗೊಳಿಸಿ, ಇಡೀ ಅಡುಗೆ ಮನೆಯನ್ನು ಸ್ವಚ್ಛಗೊಳಿಸುವಂತೆ ಮಾಡಿದ್ದಾರೆ. ಮೂಲಭೂತ ನೈರ್ಮಲ್ಯ ಕಾಪಾಡಲು ವಿಫಲವಾದ ಕಾರಣ ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ (ADC) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಡಾ. ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿ : Kadaba : ಆಸಿಡ್ ದಾಳಿ ಪ್ರಕರಣ – ಆರೋಪಿಗೆ 10 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ!