ಕಾಸರಗೋಡು: ಲಾರಿಯೊಂದು ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಉರುಳಿಬಿದ್ದ ಪರಿಣಾಮ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಡಿಕೈ ಕಂಞಿರಪ್ಪೊಯಿಲ್ ಎಂಬಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಮೃತ ದುರ್ದೈವಿಯನ್ನು ಚಾಯ್ಯೋಂ ನಿವಾಸಿ ಸಾದಿಕ್ (40) ಎಂದು ಗುರುತಿಸಲಾಗಿದೆ.
ಕಂಞಿರಪ್ಪೊಯಿಲ್ ಕುಳಂಗಾಟ್ ಎಂಬಲ್ಲಿ ಈ ಅಪಘಾತ ನಡೆದಿದೆ. ಕೆಂಪು ಕಲ್ಲುಗಳನ್ನು ಹೊತ್ತು ತಂದಿದ್ದ ಲಾರಿಯಿಂದ ಕಲ್ಲುಗಳನ್ನು ಅನ್ಲೋಡ್ ಮಾಡಿದ ಬಳಿಕ ಚಾಲಕ ಸಾದಿಕ್ ವಾಹನವನ್ನು ಮುಂದಕ್ಕೆ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಲಾರಿಯು ಸಮೀಪದಲ್ಲೇ ಇದ್ದ ಪಿ. ಗೋಪಾಲನ್ ಎಂಬವರ ಮನೆಯ ಮೇಲೆ ಉರುಳಿಬಿದ್ದಿದೆ.
ಅಪಘಾತದ ತೀವ್ರತೆಗೆ ಗೋಪಾಲನ್ ಅವರ ಮನೆಯ ಅಡುಗೆ ಕೋಣೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಇತ್ತ ಲಾರಿ ಪಲ್ಟಿಯಾದ ರಭಸಕ್ಕೆ ಚಾಲಕ ಸಾದಿಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿ : Mangaluru : 21 ವರ್ಷದೊಳಗಿನವರಿಗೆ ಸಿಗರೇಟ್-ತಂಬಾಕು ಮಾರಾಟ ಸಂಪೂರ್ಣ ನಿಷೇಧ; ನಿಯಮ ಮೀರಿದರೆ ಲೈಸನ್ಸ್ ರದ್ದು, ₹1,000 ದಂಡ!