ಕಾಸರಗೋಡು : ಕಾಫಿ/ಚಹಾ ಕುಡಿಯಲು ಬಸ್ ನಿಲ್ಲಿಸಿದಾಗ ಅಥವಾ ಬಸ್ನಿಂದ ಇಳಿಯುವಾಗ ಪ್ರಯಾಣಿಕರ ಗಮನ ಬೇರೆಡೆ ಇದ್ದಾಗ ಕಳವು ಮಾಡುವ ಗ್ಯಾಂಗ್ಗಳು ಮತ್ತೆ ಸಕ್ರಿಯವಾಗಿವೆ. ಮಂಗಳೂರಿನಿಂದ ಬಂಧುಗಳ ಮದುವೆ ಕಾರ್ಯಕ್ರಮ ಮುಗಿಸಿ ಬಂಗ್ರಮಂಜೇಶ್ವರದ ತಮ್ಮ ಮನೆಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಹಿಂತಿರುಗುತ್ತಿದ್ದ 77 ವರ್ಷದ ಪ್ರೇಮಾ ಎಂಬ ವೃದ್ಧೆ ಇಂತಹದ್ದೇ ಒಂದು ಘಟನೆಗೆ ಸಲ್ಪದಿನಗಳ ಹಿಂದೆ ಬಲಿಯಾಗುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಹೊಸಂಗಡಿ ಬಸ್ ತಂಗುದಾಣದಲ್ಲಿ ವೃದ್ಧೆ ಪ್ರೇಮಾ ಬಸ್ನಿಂದ ಕೆಳಗಿಳಿಯುತ್ತಿದ್ದರು. ಈ ವೇಳೆ ಅವರ ಹಿಂದೆಯೇ ಇದ್ದ ಚುಡಿದಾರ್ ಧರಿಸಿದ್ದ ಮಹಿಳೆಯೊಬ್ಬಳು ವೃದ್ಧೆಯ ಕೊರಳಲ್ಲಿದ್ದ 3 ಪವನ್ ಚಿನ್ನದ ಸರವನ್ನು ಕತ್ತರಿಸಲು ಅತ್ಯಂತ ಚಾಲಾಕಿತನದಿಂದ ಯತ್ನಿಸಿದ್ದಾಳೆ. ಇದನ್ನು ತಕ್ಷಣವೇ ಗಮನಿಸಿದ ಸಹಪ್ರಯಾಣಿಕ ಯುವತಿಯೊಬ್ಬಳು ವೃದ್ಧೆಯನ್ನು ಎಚ್ಚರಿಸಿದ್ದಾಳೆ. ತಕ್ಷಣ ಸಾರ್ವಜನಿಕರು ಹಾಗೂ ಬಸ್ ಪ್ರಯಾಣಿಕರು ಆರೋಪಿ ಮಹಿಳೆಯನ್ನು ಸುತ್ತುವರೆದು ಹಿಡಿದಿಟ್ಟುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ತಮಿಳುನಾಡಿನ ಮಧುರೈ ಮೂಲದ ಮುತ್ತಾತ (40) ಎಂದು ಗುರುತಿಸಲಾಗಿದೆ. ಸಾರ್ವಜನಿಕರು ಆಕೆಯನ್ನು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ್ದು, ವಿಚಾರಣೆ ನಡೆಸಿದಾಗ ಈಕೆಯ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕಳವು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ಪೊಲೀಸರು ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.