ನವದೆಹಲಿ, ಏಪ್ರಿಲ್ 24 : ಐಆರ್ಎಸ್ ಅಧಿಕಾರಿ ಪುತ್ರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮುಖ್ಯ ಆರೋಪಿ ರಾಹುಲ್ ಮೀನಾ, “ನನ್ನಿಂದ ಅಪರಾಧವಾಗಿದೆ, ತಪ್ಪು ಮಾಡಿದ್ದೇನೆ” ಎಂದು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾನೆ. ಗುರುವಾರ ಮಧ್ಯಾಹ್ನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ದೆಹಲಿ ಪೊಲೀಸರ ಮನವಿಯ ಮೇರೆಗೆ ಮ್ಯಾಜಿಸ್ಟ್ರೇಟ್ ಆರೋಪಿಯನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ತನ್ನ ಮೈಮೇಲಿನ ಗಾಯಗಳ ಬಗ್ಗೆ ಉತ್ತರಿಸಿದ ಆತ, ಟೆರೇಸ್ನಿಂದ ಇಳಿಯುವಾಗ ಇವುಗಳಾಗಿವೆ ಎಂದು ತಿಳಿಸಿದ್ದಾನೆ.
ಅಪರಾಧ ಮಾಡಲು ಕಾರಣವೇನೆಂದು ನ್ಯಾಯಾಲಯ ಕೇಳಿದಾಗ,ಲಾಕರ್ ತೆರೆಯಲು ಆಕೆಯ ಬೆರಳಚ್ಚುಗಳು ಅಗತ್ಯವಿತ್ತು ಎಂದು ಮೀನಾ ಹೇಳಿದ್ದಾನೆ. ಮನೆಯ ಕೀ ಶೂ ರ್ಯಾಕ್ನಲ್ಲಿರುವುದು ತಿಳಿದಿದ್ದ ಈತ, ಅಧಿಕಾರಿ ದಂಪತಿ ಹೊರಹೋದ ಮೇಲೆ ಒಳನುಗ್ಗಿದ್ದ. ಸ್ಟಡಿ ರೂಮ್ನಲ್ಲಿದ್ದ 22 ವರ್ಷದ ಐಐಟಿ ಪದವೀಧರೆಯ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಚಾರ್ಜರ್ ಕೇಬಲ್ನಿಂದ ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರವೆಸಗಿದ ಬಳಿಕ, ಲಾಕರ್ನ ಬಯೋಮೆಟ್ರಿಕ್ ಅನ್ಲಾಕ್ ಮಾಡಲು ಆಕೆಯ ಬೆರಳಚ್ಚು ಒತ್ತಿದ್ದ. ಆದರೆ ರಕ್ತ ಮೆತ್ತಿಕೊಂಡಿದ್ದರಿಂದ ಅದು ಸಾಧ್ಯವಾಗದೆ, ಸ್ಕ್ರೂಡ್ರೈವರ್ನಿಂದ ಬಲವಂತವಾಗಿ ಲಾಕರ್ ತೆರೆದು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದ.
ರಾಜಸ್ಥಾನದ ಅಲ್ವಾರ್ನಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕೆಲವೇ ಗಂಟೆಗಳ ನಂತರ ಈತ ದೆಹಲಿಗೆ ಬಂದು ಈ ಬರ್ಬರ ಕೃತ್ಯ ಎಸಗಿದ್ದಾನೆ. ಐಆರ್ಎಸ್ ಅಧಿಕಾರಿಯ ಮಗಳ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿ ಲಾಕರ್ ದೋಚಿದ ಆರೋಪಿಯ ಈ ಹೇಳಿಕೆಗಳು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿವೆ. ದೆಹಲಿ ಪೊಲೀಸರು ಈತನನ್ನು ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

