ಕೋಲ್ಕತ್ತಾ : ಕೋಲ್ಕತ್ತಾದ ಕಾಲಿಘಾಟ್ನಲ್ಲಿರುವ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಸಂಕೀರ್ಣದಲ್ಲಿರುವ ಪಕ್ಷದ ಕಚೇರಿ ಹಾಗೂ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕ್ಯಾಮಕ್ ಸ್ಟ್ರೀಟ್ ಕಚೇರಿಯ ಮೇಲೆ ಸಿಐಡಿ ಅಧಿಕಾರಿಗಳು ಏಕಕಾಲದಲ್ಲಿ ಈ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಸೋವಂದೇವ್ ಚಟ್ಟೋಪಾಧ್ಯಾಯ ಅವರನ್ನು ಟಿಎಂಸಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಸಂಬಂಧ ಮೇ 6 ರಂದು ನಡೆದಿದ್ದ ನಿರ್ಣಯಕ್ಕೆ ಸಂಬಂಧಿಸಿ ಈ ಹೈಪ್ರೊಫೈಲ್ ದಾಳಿ ನಡೆದಿದೆ. ಹೊಸದಾಗಿ ಚುನಾಯಿತರಾದ ಕೆಲವು ಟಿಎಂಸಿ ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಐಡಿ ಈ ಮಹತ್ವದ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿರುವ ಈ ದಾಳಿಯ ಸಮಯದಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಇಬ್ಬರೂ ದೆಹಲಿಯಲ್ಲಿದ್ದರು ಎಂದು ತಿಳಿದುಬಂದಿದೆ. ಸಿಐಡಿ ಅಧಿಕಾರಿಗಳ ಪ್ರತ್ಯೇಕ ತಂಡಗಳು ಸುಮಾರು ಮೂರು ಗಂಟೆಗಳ ಕಾಲ ಸುದೀರ್ಘವಾಗಿ ದಾಳಿ ಮತ್ತು ಮಹಜರು ಪ್ರಕ್ರಿಯೆ ನಡೆಸಿದ್ದರೂ, ಪರಿಶೀಲನೆಯ ವೇಳೆ ಯಾವುದೇ ಪ್ರಮುಖ ದಾಖಲೆ ಅಥವಾ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ತಮ್ಮ ನಾಯಕರ ಮೇಲಿನ ಈ ಸಿಐಡಿ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಟಿಎಂಸಿ ಮುಖಂಡರು, ಇದು ಕೇಂದ್ರದ ಪ್ರೇರಿತ ಹಾಗೂ ಸಂಪೂರ್ಣವಾಗಿ ರಾಜಕೀಯ ದ್ವೇಷದ ನಡವಳಿಕೆ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ದಾಳಿಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಜಿದ್ದಾಜಿದ್ದಿ ಮತ್ತಷ್ಟು ತಾರಕಕ್ಕೇರಿದೆ.
ಇದನ್ನು ಓದಿ : Manipal : ಕುಂಜಿಬೆಟ್ಟು ಮನೆಗಳ್ಳತನ ಕೇಸ್ ಕ್ಲೋಸ್; ಉಡುಪಿ ಪೊಲೀಸರ ಬಲೆಗೆ ಬಿದ್ದ ಕುಖ್ಯಾತ “Tattoo-313” ಗ್ಯಾಂಗ್!



