ಬೆಂಗಳೂರು: ದೇಶದ ಭದ್ರತೆಗೆ ಧಕ್ಕೆ ತರುವಂತಹ ನಕಲಿ ಪಾಸ್ಪೋರ್ಟ್ ದಂಧೆಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಮಂಗಳೂರಿನ ಟ್ರಾವೆಲ್ ಏಜೆಂಟ್ ಯು.ಎಂ. ಹೈದರ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ದೈಹಿಕ ವಿಕಲಚೇತನ ಎಂಬ ಮಾನವೀಯತೆಯ ಆಧಾರದ ಮೇಲೆ ಅನುಕಂಪ ತೋರಿಸಬಹುದೇ ಹೊರತು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ಪ್ರಕರಣಗಳಲ್ಲಿ ಕ್ರಿಮಿನಲ್ ವಿಚಾರಣೆಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಸ್ಪಷ್ಟಪಡಿಸಿದೆ.
ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ ದಳಕ್ಕೆ (ATS) ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ಇಬ್ರಾಹಿಂ ಖಲೀಲ್ ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಜನರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್ಪೋರ್ಟ್ ಪಡೆಯಲು ಈತ ಸಹಾಯ ಮಾಡಿದ್ದ ಎನ್ನಲಾಗಿದೆ. ಆರೋಪಿಯು ಸಂಪೂರ್ಣ ವಿಚಾರಣೆಯನ್ನು ಎದುರಿಸಿ ತನ್ನ ಮುಗ್ಧತೆಯನ್ನು ಸಾಬೀತುಪಡಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಇದೇ ಪ್ರಕರಣದಲ್ಲಿ ಪಾಸ್ಪೋರ್ಟ್ ಪರಿಶೀಲನೆ ನಡೆಸಿದ್ದ ಪೊಲೀಸ್ ಕಾನ್ಸ್ಟೇಬಲ್ ಲಕ್ಷ್ಮಣ್ ಅವರ ನಡವಳಿಕೆಯ ವಿರುದ್ಧವೂ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಒಂದೇ ವಿಳಾಸದಲ್ಲಿ ಸುಮಾರು 15 ಪಾಸ್ಪೋರ್ಟ್ ಅರ್ಜಿಗಳು ಬಂದಿದ್ದರೂ, ಕಾನ್ಸ್ಟೇಬಲ್ ಯಾವುದೇ ಕ್ಷೇತ್ರ ಪರಿಶೀಲನೆ ನಡೆಸದೆ ಅನುಮೋದನೆ ನೀಡಿರುವುದು ಸಾರ್ವಜನಿಕ ನಂಬಿಕೆಗೆ ಮಾಡಿದ ದ್ರೋಹವಾಗಿದೆ ಎಂದು ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಈ ಕಾನ್ಸ್ಟೇಬಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದನ್ನು ಶೀಘ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ದೇಶದ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ವ್ಯಕ್ತಿ, ಮಧ್ಯವರ್ತಿ ಅಥವಾ ಸರ್ಕಾರಿ ಅಧಿಕಾರಿಯೇ ಆಗಿದ್ದರೂ ಕಾನೂನಿನ ಕ್ರಮ ಎದುರಿಸಲೇಬೇಕು ಎಂದು ನ್ಯಾಯಾಲಯ ಎಚ್ಚರಿಸಿದೆ.
ಪ್ರಾಸಿಕ್ಯೂಷನ್ ವಿವರಗಳ ಪ್ರಕಾರ, ಪುತ್ತೂರು ತಾಲೂಕಿನಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದ ಹೈದರ್, ಮಂಗಳೂರಿನಲ್ಲಿ ನಕಲಿ ವಾಸಸ್ಥಳದ ದಾಖಲೆಗಳು ಮತ್ತು ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಉಗ್ರ ಇಬ್ರಾಹಿಂ ಖಲೀಲ್ಗೆ ಪಾಸ್ಪೋರ್ಟ್ ಪಡೆಯಲು ಸಹಾಯ ಮಾಡಿದ್ದ. ಈ ನಕಲಿ ದಾಖಲೆಗಳ ಆಧಾರದ ಮೇಲೆ ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯಿಂದ ಪಾಸ್ಪೋರ್ಟ್ಗಳನ್ನು ವಿತರಿಸಲಾಗಿತ್ತು. ತನಿಖೆಯ ನಂತರ ಮಂಗಳೂರು ಪೂರ್ವ ಪೊಲೀಸರು ಉಗ್ರ ಇಬ್ರಾಹಿಂ ಖಲೀಲ್ (A1) ಮತ್ತು ಹೈದರ್ (A3) ಸೇರಿದಂತೆ ಹಲವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಹೈದರ್ ಅರ್ಜಿಯನ್ನು ಈಗ ವಜಾಗೊಳಿಸಲಾಗಿದೆ.
ಇದನ್ನು ಓದಿ : Mangaluru : ನಾಗುರಿಯಲ್ಲಿ ಮನೆಯ ಮೇಲೆ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವು