ಕುಂದಾಪುರ : ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರ ಮುಳ್ಳಿಕಟ್ಟೆ ಸಮೀಪದ ಮೊವಾಡಿ ಕ್ರಾಸ್ ಬಳಿ ನಡೆದಿದ್ದ, 8 ಶಾಲಾ ಮಕ್ಕಳ ಸಾವಿಗೆ ಕಾರಣವಾದ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ 10 ವರ್ಷಗಳ ಬಳಿಕ ಕುಂದಾಪುರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರ ಮೂರನೇ ಹೆಚ್ಚುವರಿ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಮಣಿಕಂಠ ಎಂ.ಎಸ್. ಅವರು, ಅಪರಾಧಿ ಖಾಸಗಿ ಬಸ್ ಚಾಲಕ ಮಂಜುನಾಥ್ (42) ಎಂಬಾತನಿಗೆ 1 ವರ್ಷ 17 ದಿನಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 12,500 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.
2016ರ ಜೂನ್ 21 ರಂದು ಡಾನ್ ಬೋಸ್ಕೊ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಾರುತಿ ಓಮ್ನಿ ಕಾರಿಗೆ, ತ್ರಾಸಿ ಕಡೆಯಿಂದ ಅತಿವೇಗ ಹಾಗೂ ಅಲಕ್ಷ್ಯದಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದಿತ್ತು. ಈ ದುರಂತದಲ್ಲಿ ಓಮ್ನಿಯಲ್ಲಿದ್ದ ಶಾಲೆ ಮಕ್ಕಳಾದ ಅನನ್ಯ, ನಿಮಿತ್, ರಾಯಸ್ಟನ್, ಕ್ಲೇರಿಸಾ, ಅನಿತಾ, ಆಲ್ವಿಟಾ, ಬೆಲ್ಲಿನ್ ಹಾಗೂ ಕೆಲಿಷ್ಟಾ ಎಂಬ 8 ಮಕ್ಕಳು ದಾರುಣವಾಗಿ ಸಾವುನ್ನಪ್ಪಿದ್ದರು.
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ಸಿಪಿಐ ರಾಘವ ಎಸ್. ಪಡೀಲ್ ಸಂಪೂರ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಉಮಾ ದಾಮೋದರ ನಾಯಕ್ ಸರ್ಕಾರದ ಪರ ವಾದ ಮಂಡಿಸಿದ್ದರು.
ಇದನ್ನು ಓದಿ : Mangaluru : 2019ರ ಮನೆಗೆಲಸದ ಕಳವು ಪ್ರಕರಣ; 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ಬಂಧನ!