HomeLOCALMangaluru : ನಾಗುರಿಯಲ್ಲಿ ಮನೆಯ ಮೇಲೆ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರು...

Mangaluru : ನಾಗುರಿಯಲ್ಲಿ ಮನೆಯ ಮೇಲೆ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವು

ಮಂಗಳೂರು : ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗರೋಡಿಯಲ್ಲಿ ಭಾರಿ ಮಳೆಯಿಂದಾಗಿ ಬಾಡಿಗೆ ಮನೆಗಳ ಮೇಲೆ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ಎಳೆಯ ಹೆಣ್ಣುಮಕ್ಕಳು ಸೇರಿದಂತೆ ಮೂವರು ಸಾವು ಅನುಭವಿಸಿರುವ ಅತ್ಯಂತ ದುರಂತ ಘಟನೆ ಜುಲೈ 1ರ ಮಂಗಳವಾರದಂದು ಮುಂಜಾನೆ ಸಂಭವಿಸಿದೆ. ಗರೋಡಿಯ ‘ಮರಿಯಲ್ ಹೌಸ್’ ಎಂಬಲ್ಲಿ ಮುಂಜಾನೆ 4.45 ರಿಂದ 5.00 ಗಂಟೆಯ ಅವಧಿಯಲ್ಲಿ ಈ ಘಟನೆ ನಡೆದಿದ್ದು, ನಿರಂತರವಾಗಿ ಸುರಿದ ಮಳೆಗೆ ಕಾಂಪೌಂಡ್ ಗೋಡೆ ಧರೆಗುರುಳಿದೆ. ಈ ಗೋಡೆಯ ಕೆಳಭಾಗದಲ್ಲಿದ್ದ ನಾಲ್ಕು ಸಾಲು ಬಾಡಿಗೆ ಮನೆಗಳ ಹಿಂಭಾಗದ ಗೋಡೆಗಳು ಸಂಪೂರ್ಣ ಕುಸಿದು ಬಿದ್ದಿದ್ದು, ಅಲ್ಲಿ ವಾಸವಿದ್ದ ನಾಲ್ಕು ಕುಟುಂಬಗಳ ಪೈಕಿ ಎರಡು ಕುಟುಂಬಗಳು ಈ ದುರಂತಕ್ಕೆ ನೇರವಾಗಿ ತುತ್ತಾಗಿವೆ.

ಈ ಪೈಕಿ ಮೊದಲನೇ ಕುಟುಂಬ ಬಿಹಾರ ಮೂಲದ ಲಾಲ್ ಬಾಬು ಅವರದ್ದಾಗಿದ್ದು, ಇವರು ಕಳೆದ ಎಂಟು ವರ್ಷಗಳಿಂದ ತಮ್ಮ ಪತ್ನಿ ಇಂದು ಹಾಗೂ ನಾಲ್ಕು ಹೆಣ್ಣುಮಕ್ಕಳೊಂದಿಗೆ ಇಲ್ಲಿ ವಾಸವಾಗಿದ್ದರು. ಗೋಡೆ ಕುಸಿದ ತಕ್ಷಣ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಲಾಲ್ ಬಾಬು, ಅವರ ಪತ್ನಿ ಇಂದು, ಹದಿನಾಲ್ಕು ವರ್ಷದ ಅಲ್ಕಾ ಮತ್ತು ಹನ್ನೊಂದು ವರ್ಷದ ಅನುಷಾ ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ ದುರದೃಷ್ಟವಶಾತ್ ಎಂಟು ವರ್ಷದ ಅನಾಮಿಕಾ ಚೌರಾಸಿಯಾ ಹಾಗೂ ನಾಲ್ಕು ವರ್ಷದ ಪರಿ ಅವಶೇಷಗಳಡಿ ಸಿಲುಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅದಾಗಲೇ ಕೊನೆಯುಸಿರೆಳೆದಿದ್ದರು.

ದುರಂತಕ್ಕೆ ತುತ್ತಾದ ಎರಡನೇ ಕುಟುಂಬ ಸಹ ಬಿಹಾರ ಮೂಲದ ಬಾಲಕೃಷ್ಣ (48) ಅವರದ್ದಾಗಿದ್ದು, ಇವರು ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ವಾಸವಿದ್ದರು. ಘಟನೆಯಲ್ಲಿ ಬಾಲಕೃಷ್ಣ ಅವರನ್ನು ಸುರಕ್ಷಿತವಾಗಿ ಹೊರತರಲಾಗಿದೆಯಾದರೂ, ಅವರ ನಲವತ್ತಾರು ವರ್ಷದ ಪತ್ನಿ ಶಾಂತಾ ಅವರು ಅವಶೇಷಗಳಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದರು. ದುರಂತದಲ್ಲಿ ಗಾಯಗೊಂಡಿದ್ದ ಮೂವರನ್ನೂ ತಕ್ಷಣವೇ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಕಂಕನಾಡಿ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರು ರಕ್ಷಣಾ ಕಾರ್ಯವನ್ನು ಪೂರ್ಣಗೊಳಿಸಿದ್ದು, ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments