ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ಸಾಲದ ಒತ್ತಡದಿಂದ ಮನನೊಂದು ಹೋಟೆಲ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ವರದಿಯಾಗಿದೆ. ಹುಕ್ಕೇರಿ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ‘ಹನುಮಾನ್ ಹೋಟೆಲ್’ ನಡೆಸುತ್ತಿದ್ದ ರಾಮ ಹಳ್ಳೂರಿ ಎಂಬುವವರು ಈ ಕಠಿಣ ನಿರ್ಧಾರ ಕೈಗೊಂಡ ದುರ್ದೈವಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ವಾಣಿಜ್ಯ ಸಿಲಿಂಡರ್ಗಳ ತೀವ್ರ ಅಭಾವ ಉಂಟಾದ ಹಿನ್ನೆಲೆಯಲ್ಲಿ, ಹೋಟೆಲ್ ನಡೆಸಲು ಸಾಧ್ಯವಾಗದೆ ಅವರು ಅದನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರು ಎನ್ನಲಾಗಿದೆ.
ಹೋಟೆಲ್ ಸ್ಥಗಿತಗೊಂಡಿದ್ದರಿಂದ ದೈನಂದಿನ ಆದಾಯ ಸಂಪೂರ್ಣವಾಗಿ ನಿಂತುಹೋಗಿತ್ತು, ಇದು ರಾಮ ಹಳ್ಳೂರಿ ಅವರ ಹಣಕಾಸಿನ ಪರಿಸ್ಥಿತಿಯನ್ನು ತೀವ್ರವಾಗಿ ಹದಗೆಡಿಸಿತ್ತು. ಹೋಟೆಲ್ ಉದ್ಯಮಕ್ಕಾಗಿ ಮಾಡಿದ್ದ ಸಾಲ ಮತ್ತು ಅದರ ಬಡ್ಡಿಯ ಒತ್ತಡ ಒಂದೆಡೆಯಾದರೆ, ಗ್ಯಾಸ್ ಸಿಗದೆ ಉದ್ಯಮವೇ ಇಲ್ಲದಂತಾದ ಮಾನಸಿಕ ಆತಂಕ ಅವರನ್ನು ಕಾಡಿತ್ತು. ಇದೇ ಕಾರಣಕ್ಕೆ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲಿ ಗ್ಯಾಸ್ ಅಭಾವದಿಂದ ಹೋಟೆಲ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಬೆಳಗಾವಿಯಲ್ಲೂ ಇಂತಹದ್ದೇ ಘಟನೆ ಸಂಭವಿಸಿರುವುದು ರಾಜ್ಯದ ಹೋಟೆಲ್ ಉದ್ಯಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಉಂಟಾಗಿರುವ ಅನಿಲ ಪೂರೈಕೆಯ ಬಿಕ್ಕಟ್ಟು ಈಗ ಕೇವಲ ವ್ಯವಹಾರಕ್ಕೆ ಮಾತ್ರವಲ್ಲದೆ, ಸಾಮಾನ್ಯ ಉದ್ಯಮಿಗಳ ಜೀವಕ್ಕೂ ಕುತ್ತು ತರುತ್ತಿದೆ.

