ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಟಿ. ಬೇಗೂರು ಎಂಬಲ್ಲಿರುವ ಶ್ರೀ ಸಿದ್ದಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ (Sri Siddhartha Institute of Medical Sciences) ಈ ಘಟನೆ ನಡೆದಿದೆ. ಬುಧವಾರದಂದು ಪ್ರೊಫೆಸರ್ ಮೊಹಮ್ಮದ್ ಎಂಬುವವರು ಪಾಠ ಮಾಡುತ್ತಿದ್ದ ವೇಳೆ ಈ ಹೈಡ್ರಾಮಾ ನಡೆದಿದ್ದು, ವಿದ್ಯಾರ್ಥಿಗಳು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಕ್ಲಾಸ್ ರೂಮ್ನಲ್ಲಿ ನಡೆದಿದ್ದೇನು?
ವರದಿಗಳ ಪ್ರಕಾರ, ಪ್ರೊಫೆಸರ್ ಮೊಹಮ್ಮದ್ ಅವರು ತರಗತಿಯನ್ನು ಉದ್ದೇಶಿಸಿ ಮಾತನಾಡುವಾಗ, ಇದೇ ಬ್ಯಾಚ್ನ ವಿದ್ಯಾರ್ಥಿನಿಯೊಬ್ಬಳು ತನಗೆ ಪ್ರಪೋಸ್ ಮಾಡಿದ್ದಾಳೆ ಮತ್ತು ತಾನೂ ಕೂಡ ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ‘ಸಂಭ್ರಮ’ಕ್ಕಾಗಿ ಇಡೀ ಕ್ಲಾಸ್ಗೆ ಹಂಚಲು ಒಂದು ದೊಡ್ಡ ಬಾಕ್ಸ್ ತುಂಬಾ ಚಾಕೊಲೇಟ್ ತಂದು ಅದನ್ನು ಹಂಚಲು ವ್ಯವಸ್ಥೆ ಮಾಡಿದ್ದರು.
ವಿದ್ಯಾರ್ಥಿನಿಯ ಆಕ್ರೋಶ ಮತ್ತು ಹಲ್ಲೆ:
ಪ್ರೊಫೆಸರ್ ಮಾತುಗಳಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ತಕ್ಷಣವೇ ವಿರೋಧ ವ್ಯಕ್ತಪಡಿಸಿದ್ದಾರೆ. “ನಾನು ಯಾವಾಗ ನಿನಗೆ ಪ್ರಪೋಸ್ ಮಾಡಿದೆ?” ಎಂದು ಗಟ್ಟಿಯಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರೊಫೆಸರ್, “ನೀನು ನನಗೆ ಐ ಲವ್ ಯೂ ಎಂದು ಹೇಳಿದ್ದೀಯಾ, ನನ್ನ ಬಳಿ ಅದಕ್ಕೆ ಸಿಕ್ಕೆ ಸಿಸಿಟಿವಿ ಫುಟೇಜ್ ಇದೆ” ಎಂದು ವಾದಿಸಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿನಿ, ತನ್ನ ಚಪ್ಪಲಿ ತೆಗೆದು ಎಲ್ಲರ ಮುಂದೆಯೇ ಪ್ರೊಫೆಸರ್ಗೆ ಹೊಡೆದಿದ್ದಾರೆ. ಈ ವೇಳೆ ಇತರ ವಿದ್ಯಾರ್ಥಿಗಳು ಕೂಡ ಸೇರಿಕೊಂಡು ಪ್ರೊಫೆಸರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮತ್ತು ಕಾಲೇಜು ಕ್ರಮ:
ಈ ಘಟನೆಯು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕಾಲೇಜು ಆವರಣದಲ್ಲಿ ಈ ಘಟನೆಯು ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದು, ಶಿಕ್ಷಕನೊಬ್ಬ ತನ್ನ ಸ್ಥಾನದ ಗೌರವ ಮರೆತು ವಿದ್ಯಾರ್ಥಿನಿಯ ಜೊತೆ ಈ ರೀತಿ ವರ್ತಿಸಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

