ವಿಶಾಖಪಟ್ಟಣಂ : ವಿಶಾಖಪಟ್ಟಣಂನ ಗಜುವಾಕು ಪೊಲೀಸ್ ಠಾಣೆ ವ್ಯಾಪ್ತಿಯ ಎಲ್.ವಿ.ನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ವಿಝಿಯಂಗರಂ ಜಿಲ್ಲೆಯ ರಜಮ್ ಗ್ರಾಮದ ನಿವಾಸಿಯಾಗಿರುವ ರವೀಂದ್ರ (35) ಎಂದು ಗುರುತಿಸಲಾಗಿದೆ. ಈತ ನೌಕಾಪಡೆಯ ಸಿಬ್ಬಂದಿಯಾಗಿದ್ದು, ಮೌನಿಕಾ (29) ಎಂಬಾಕೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗಿದೆ. ರವೀಂದ್ರನ ಪತ್ನಿ ತವರುಮನೆಗೆ ತೆರಳಿದ್ದ ಸಮಯದಲ್ಲಿ, ಭಾನುವಾರ (ಮಾರ್ಚ್ 29) ಮೌನಿಕಾ ಆತನ ಮನೆಗೆ ಬಂದಿದ್ದಳು. ಈ ವೇಳೆ ಇಬ್ಬರ ನಡುವೆ ಉಂಟಾದ ಗಂಭೀರ ಜಗಳ ವಿಕೋಪಕ್ಕೆ ತಿರುಗಿ, ಸಿಟ್ಟಿಗೆದ್ದ ರವೀಂದ್ರ ಚಾಕುವಿನಿಂದ ಇರಿದು ಮೌನಿಕಾಳನ್ನು ಹತ್ಯೆಗೈದಿದ್ದಾನೆ.
ಹತ್ಯೆಯ ನಂತರ ರವೀಂದ್ರ ಮೃತದೇಹವನ್ನು ಅತ್ಯಂತ ಬರ್ಬರವಾಗಿ ತುಂಡುತುಂಡಾಗಿ ಕತ್ತರಿಸಿದ್ದಾನೆ. ದೇಹದ ಕೆಲವು ಭಾಗಗಳನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ವಿಲೇವಾರಿ ಮಾಡಿದ್ದರೆ, ಉಳಿದ ಭಾಗಗಳನ್ನು ತನ್ನ ಮನೆಯ ಫ್ರಿಜ್ನಲ್ಲಿ ಅಡಗಿಸಿಟ್ಟಿದ್ದಾನೆ. ಈ ಭೀಕರ ಕೃತ್ಯ ಎಸಗಿದ ಬಳಿಕ ರವೀಂದ್ರನೇ ಪೊಲೀಸ್ ಠಾಣೆಗೆ ತೆರಳಿ ತನ್ನ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಪೊಲೀಸರು ಆತನ ನಿವಾಸದಿಂದ ಮೃತದೇಹದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಸ್ತುತ ಮೃತದೇಹದ ರುಂಡ ಮಾತ್ರ ಇನ್ನೂ ಪತ್ತೆಯಾಗಿಲ್ಲ. ರವೀಂದ್ರ ಅದನ್ನು ಬೇರೆಲ್ಲೋ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ರುಂಡ ಮತ್ತು ದೇಹದ ಇತರ ಭಾಗಗಳನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಈ ಘಟನೆಯು ವಿಶಾಖಪಟ್ಟಣಂ ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿದೆ.

