ಮಲಪ್ಪುರಂ : ಶುಕ್ರವಾರ ರಾತ್ರಿ ಸುಮಾರು 7:30 ರ ಸುಮಾರಿಗೆ ವಂಡೂರು ಸಮೀಪದ ಚೆಲ್ಲಿತೋಡ್ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಕಾಂಗ್ರೆಸ್ ನಾಯಕ ಎ.ಪಿ. ಅನಿಲ್ ಕುಮಾರ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಶಿ ತರೂರ್ ಅವರು ತೆರಳುತ್ತಿದ್ದಾಗ, ಕಿರಿದಾದ ಸೇತುವೆಯ ಬಳಿ ರಸ್ತೆ ತಡೆ ಉಂಟಾಗಿತ್ತು. ಸಂಸದರ ವಾಹನಕ್ಕೆ ದಾರಿ ಮಾಡಿಕೊಡುವಂತೆ ಗನ್ ಮ್ಯಾನ್ ರತೀಶ್ ಕೆ.ಪಿ. ಅವರು ಮುಂದಿದ್ದ ವಾಹನಗಳಿಗೆ ಸೂಚಿಸಿದಾಗ ಸಂಘರ್ಷ ಆರಂಭವಾಗಿದೆ.
ಬೆಂಗಾವಲು ಪಡೆಯ ಮೇಲೆ ಹಲ್ಲೆ: ಎರಡು ವಾಹನಗಳಲ್ಲಿ ಬಂದ ಐವರು ದುಷ್ಕರ್ಮಿಗಳ ತಂಡವು ಸಂಸದರ ಕಾರನ್ನು ಅಡ್ಡಗಟ್ಟಿದೆ. ಅಡೆತಡೆಯನ್ನು ತೆರವುಗೊಳಿಸಲು ಪ್ರಯತ್ನಿಸಿದ ಗನ್ ಮ್ಯಾನ್ ಮತ್ತು ಚಾಲಕನ ಮೇಲೆ ಈ ಗುಂಪು ಮನಬಂದಂತೆ ಹಲ್ಲೆ ನಡೆಸಿದೆ ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಂಡೂರು ಪೊಲೀಸರು ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಉಳಿದ ನಾಲ್ವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಶಶಿ ತರೂರ್ ಸುರಕ್ಷಿತ: ದಾಳಿಯ ನಂತರ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್ ಅವರು, “ನಾನು ಸುರಕ್ಷಿತವಾಗಿದ್ದೇನೆ, ನನಗೆ ಯಾವುದೇ ತೊಂದರೆಯಾಗಿಲ್ಲ. ನನ್ನ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆಯಾಗಿದ್ದು, ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಹಿತೈಷಿಗಳ ಕಾಳಜಿಗೆ ಧನ್ಯವಾದಗಳು. ನಿಗದಿತ ಕಾರ್ಯಕ್ರಮಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿವೆ” ಎಂದು ತಿಳಿಸಿದ್ದಾರೆ.

