Friday, April 10, 2026
HomeLOCALMangaluru : ಹಳೆ ಬಂದರಿನ ಬಳಿ ನದಿಯಲ್ಲಿ ಶವ ಪತ್ತೆ: ಕೊಲೆ ಪ್ರಕರಣದಲ್ಲಿ ಇಬ್ಬರ ಬಂಧನ

Mangaluru : ಹಳೆ ಬಂದರಿನ ಬಳಿ ನದಿಯಲ್ಲಿ ಶವ ಪತ್ತೆ: ಕೊಲೆ ಪ್ರಕರಣದಲ್ಲಿ ಇಬ್ಬರ ಬಂಧನ

ಮಂಗಳೂರು : ಮಂಗಳೂರಿನ ಹಳೆ ಬಂದರು (Old Port) ಪ್ರದೇಶದ ನದಿ ನೀರಿನಲ್ಲಿ ಮೊಹಿದ್ದೀನ್ ನಾಸಿರ್ ಎಂಬುವವರ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಒಡಿಶಾ ಮೂಲದ ದೀಪಕ್ ಕುಮಾರ್ ಕರೈ ಮತ್ತು ಬಿಹಾರ ಮೂಲದ ಮೊಹಮ್ಮದ್ ಬಹುವಾ ಎಂದು ಗುರುತಿಸಲಾಗಿದೆ. ಬುಧವಾರ ಮುಂಜಾನೆ ಹಳೆ ಬಂದರಿನ ಮೀನುಗಾರಿಕಾ ಧಕ್ಕೆಯ ಬಳಿ ನಾಸಿರ್ ಅವರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು, ಇದು ನಗರದಲ್ಲಿ ಭಾರಿ ಸಂಚಲನ ಮೂಡಿಸಿತ್ತು.

ಜೆಟ್ಟಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಸಮೀಪವೇ ಈ ಭೀಕರ ಕೃತ್ಯ ನಡೆದಿದೆ. ಅಲ್ಲಿ ನಿಲ್ಲಿಸಲಾಗಿದ್ದ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದು, ಸ್ಥಳದಲ್ಲಿ ರಕ್ತಸಿಕ್ತ ಕಬ್ಬಿಣದ ರಾಡ್ ಕೂಡ ಪತ್ತೆಯಾಗಿದೆ. ಅಲ್ಲದೆ, ಕೊಲೆ ಮಾಡಿದ ನಂತರ ಶವವನ್ನು ನದಿಗೆ ಎಸೆಯಲು ಎಳೆದೊಯ್ದ ಗುರುತುಗಳು ಸ್ಥಳದಲ್ಲಿ ಗೋಚರಿಸಿದ್ದವು. ಈ ಎಲ್ಲಾ ಸಾಕ್ಷ್ಯಗಳ ಆಧಾರದ ಮೇಲೆ ಮಂಗಳೂರು ದಕ್ಷಿಣ ಪೊಲೀಸರು ತನಿಖೆ ನಡೆಸಿ ಪರರಾಜ್ಯದ ಈ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಗೆ ಮೊಬೈಲ್ ಕಳ್ಳತನದ ಶಂಕೆ ವ್ಯಕ್ತವಾಗಿದೆ. ಬುಧವಾರ ಮುಂಜಾನೆ ಆರೋಪಿಗಳು ಸ್ಥಳೀಯರೊಬ್ಬರ ಬಳಿ ಬಂದು, “ಬಿಳಿ ಶೂ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬ ನಮ್ಮ ಮೊಬೈಲ್ ಕದ್ದಿದ್ದಾನೆ” ಎಂದು ವಿಚಾರಿಸಿದ್ದರು. ಮೃತ ನಾಸಿರ್ ಕೂಡ ಅಂದೇ ಅದೇ ರೀತಿಯ ಬಟ್ಟೆ ಧರಿಸಿದ್ದರು. ಹೀಗಾಗಿ ಮೊಬೈಲ್ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಸಾಧ್ಯತೆಯಿದೆ. ಆದರೆ ಮೃತ ನಾಸಿರ್ ನಿಜವಾಗಿಯೂ ಮೊಬೈಲ್ ಕದ್ದಿದ್ದರೇ ಅಥವಾ ಕೊಲೆಗೆ ಬೇರೆನಾದರೂ ಉದ್ದೇಶವಿದೆಯೇ ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!