ಮಣಿಪಾಲ :ಮಣಿಪಾಲದ ಕೆಎಂಸಿ ಆಸ್ಪತ್ರೆಯ ಬಳಿ ನಡುಹಗಲೇ ನಡೆದಿದ್ದ ಭೀಕರ ಅಪಹರಣ ಪ್ರಕರಣವನ್ನು ಉಡುಪಿ ಪೊಲೀಸರು ಭೇದಿಸಿದ್ದಾರೆ. ತೆಲಂಗಾಣದಲ್ಲಿ ಸಾಹಸಮಯ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು, ಅಪಹರಣಕ್ಕೊಳಗಾಗಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಲ್ಲದೆ, ಕೃತ್ಯದಲ್ಲಿ ಭಾಗಿಯಾಗಿದ್ದ ಎಂಟು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಘಟನೆಯ ಹಿನ್ನೆಲೆ: ಕಳೆದ ಮಾರ್ಚ್ 31ರಂದು ಮಧ್ಯಾಹ್ನ 12:15ರ ಸುಮಾರಿಗೆ ಮಣಿಪಾಲದ ಆಸ್ಪತ್ರೆಯೊಂದರ ಬಳಿ ಈ ಘಟನೆ ನಡೆದಿತ್ತು. ಕುಂದಾಪುರದ ದಸರಾಮಕ್ಕಿ ನಿವಾಸಿ ರಾಮ್ ಮಡಿವಾಳ ಎಂಬುವವರು ತಮ್ಮ ಸಹೋದರ ಲಕ್ಷ್ಮಣ್ ಅವರನ್ನು ಚಿಕಿತ್ಸೆಗೆಂದು ಕರೆತಂದಿದ್ದರು. ಈ ವೇಳೆ ರಾಮ್ ಮತ್ತು ಅವರ ಇನ್ನಿಬ್ಬರು ಸಹೋದರರಾದ ರಾಜೇಶ್ ಹಾಗೂ ಸುಧೀರ್ ಕ್ಯಾಂಟೀನ್ ಬಳಿ ಇದ್ದಾಗ, ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಕಾರಿನಲ್ಲಿ ಬಂದ 7-8 ಮಂದಿಯ ಗ್ಯಾಂಗ್ ರಾಜೇಶ್ ಮೇಲೆ ದಾಳಿ ಮಾಡಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದ ರಾಜೇಶ್ನನ್ನು ಬಲವಂತವಾಗಿ ಕಾರಿಗೆ ಹಾಕಿಕೊಂಡು ಹಂತಕರು ಹಿರಿಯಡ್ಕ ಮಾರ್ಗವಾಗಿ ಪರಾರಿಯಾಗಿದ್ದರು.
ಪೊಲೀಸರ ಮಿಂಚಿನ ಕಾರ್ಯಾಚರಣೆ: ಅಪಹರಣದ ದೂರು ದಾಖಲಾಗುತ್ತಿದ್ದಂತೆ ಮಣಿಪಾಲ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ತಾಂತ್ರಿಕ ಸುಳಿವು ಬೆನ್ನತ್ತಿದ ಪೊಲೀಸರು ಆರೋಪಿಗಳು ತೆಲಂಗಾಣದಲ್ಲಿ ಇರುವುದನ್ನು ಪತ್ತೆಹಚ್ಚಿದರು. ಏಪ್ರಿಲ್ 9ರಂದು ನಸುಕಿನ ಜಾವ 3:30ರ ಸುಮಾರಿಗೆ ತೆಲಂಗಾಣದ ಜಗಿತ್ಯಾಲ ಜಿಲ್ಲೆಯ ಗೋವಿಂದಪಲ್ಲಿಯ ಲಾಡ್ಜ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಎಂಟು ಮಂದಿ ಆರೋಪಿಗಳಾದ ಮಲ್ಲಾರೆಡ್ಡಿ, ತುಳಜಾ, ನರಸಿಂಹ, ಹುಸೇನ್, ಶಂಕರ್, ನಾಗೇಶ್, ಪರಮೇಶ್ವರ್ ಮತ್ತು ವಿಜಯ್ ಎಂಬುವವರನ್ನು ಬಂಧಿಸಲಾಯಿತು.
ಕಾರುಗಳ ವಶ: ಪೊಲೀಸರು ಅಪಹರಣಕ್ಕೊಳಗಾಗಿದ್ದ ರಾಜೇಶ್ನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಿಯಾ ಕ್ಯಾರೆನ್ಸ್ (TG 05 C 1716) ಮತ್ತು ನಂಬರ್ ಪ್ಲೇಟ್ ಇಲ್ಲದ ಮಹೀಂದ್ರಾ ಥಾರ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ತೆಲಂಗಾಣ ಮೂಲದ ಈ ಗ್ಯಾಂಗ್ ಹಳೆಯ ವ್ಯವಹಾರದ ದ್ವೇಷಕ್ಕಾಗಿ ಈ ಕೃತ್ಯ ಎಸಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಉಡುಪಿ ಸೈಬರ್ ಪೊಲೀಸ್ ಠಾಣೆಯ ಪಿಎಸ್ಐ ಸುದರ್ಶನ್ ಮತ್ತು ಮಣಿಪಾಲ ಪಿಎಸ್ಐ ತಿಮ್ಮೇಶ್ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಇದನ್ನು ಓದಿ : KARKALA :ಕಾರ್ಕಳ ಉದ್ಯಮಿ ಸುದೀಪ್ ರೈ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಿಲಾಡಿ ಪತ್ನಿ ಸೌಮ್ಯ ಶೆಟ್ಟಿ ಅರೆಸ್ಟ್!;

