ಪಟ್ನಾ: ಬಿಹಾರದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗಿದೆ. ಯಾರು ನಿತೀಶ್ ಕುಮಾರ್ ವಿರುದ್ಧ ತೊಡೆತಟ್ಟಿ, ಅವರನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿಸುವವರೆಗೆ ತಲೆಗೆ ಧರಿಸಿದ ಪೇಟೆಯನ್ನು ಬಿಚ್ಚುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರೋ, ಅದೇ ಸಾಮ್ರಾಟ್ ಚೌಧರಿ ಇಂದು ಬಿಹಾರದ ಮಕುಟಪ್ರಾಯರಾಗಿ ಹೊರಹೊಮ್ಮಿದ್ದಾರೆ. ಲಾಲೂ ಪ್ರಸಾದ್ ಯಾದವ್ ಅವರ ನಿಷ್ಠಾವಂತ ನಾಯಕನಾಗಿದ್ದ ಚೌಧರಿ, ಇಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಅತ್ಯಂತ ನಂಬಿಕಸ್ತ ನಾಯಕನಾಗಿ ಬೆಳೆದು ಬಂದ ಹಾದಿ ನಿಜಕ್ಕೂ ರೋಚಕ.
ಸಾಮ್ರಾಟ್ ಚೌಧರಿ ಅವರ ರಾಜಕೀಯ ಪಯಣ ಆರಂಭವಾಗಿದ್ದು ರಾಷ್ಟ್ರೀಯ ಜನತಾ ದಳ (RJD) ಮೂಲಕ. 1999 ರಲ್ಲಿ ರಬ್ರಿ ದೇವಿ ಅವರ ಸರ್ಕಾರದಲ್ಲಿ ಅತಿ ಕಿರಿಯ ವಯಸ್ಸಿನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಇವರು ದೇಶದ ಗಮನ ಸೆಳೆದಿದ್ದರು. ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದ ಇವರು, ನಂತರದ ದಿನಗಳಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಜೆಡಿಯು ಸೇರ್ಪಡೆಯಾಗಿ ನಿತೀಶ್ ಕುಮಾರ್ ಸಂಪುಟದಲ್ಲೂ ಮಂತ್ರಿಯಾಗಿ ಕೆಲಸ ಮಾಡಿದ್ದರು.
2018 ರಲ್ಲಿ ಬಿಜೆಪಿ ಸೇರಿದ ನಂತರ ಸಾಮ್ರಾಟ್ ಚೌಧರಿ ಅವರ ಅದೃಷ್ಟವೇ ಬದಲಾಯಿತು. ಬಿಹಾರದಲ್ಲಿ ಬಿಜೆಪಿ ತನ್ನದೇ ಆದ ನೆಲೆಯನ್ನು ಭದ್ರಪಡಿಸಿಕೊಳ್ಳಲು ಇವರನ್ನು ಪ್ರಮುಖ ದಾಳವನ್ನಾಗಿ ಬಳಸಿಕೊಂಡಿತು. ಪ್ರಬಲ ಕುಶ್ವಾಹ ಸಮುದಾಯಕ್ಕೆ ಸೇರಿದ ಚೌಧರಿ, ರಾಜ್ಯದಲ್ಲಿ ಬಿಜೆಪಿಯ ಪ್ರಬಲ ಒಬಿಸಿ ಮುಖವಾಗಿ ಹೊರಹೊಮ್ಮಿದರು. ಕಳೆದ ವರ್ಷ ಇವರನ್ನು ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದಾಗ, ಇಡೀ ರಾಜ್ಯದಲ್ಲಿ ಕೇಸರಿ ಅಲೆ ಎಬ್ಬಿಸುವ ಜವಾಬ್ದಾರಿಯನ್ನು ಹೈಕಮಾಂಡ್ ಇವರಿಗೆ ನೀಡಿತ್ತು.
ನಿತೀಶ್ ಕುಮಾರ್ ಅವರು ಎನ್ಡಿಎ ಮೈತ್ರಿ ತೊರೆದು ಮಹಾಗಟಬಂಧನ್ ಸೇರಿದಾಗ, ಸಾಮ್ರಾಟ್ ಚೌಧರಿ ಕೇಸರಿ ಪೇಟೆಯನ್ನು ಧರಿಸಿ “ನಿತೀಶ್ ಅವರನ್ನು ಅಧಿಕಾರದಿಂದ ಕಿತ್ತೆಸೆಯುವವರೆಗೂ ಇದನ್ನು ಬಿಚ್ಚುವುದಿಲ್ಲ” ಎಂದು ಶಪಥ ಮಾಡಿದ್ದರು. ಇಂದು ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಿ ಬಿಜೆಪಿಯ ಬೆಂಬಲದೊಂದಿಗೆ ಹೊಸ ಸರ್ಕಾರ ರಚನೆಗೆ ಮುಂದಾಗಿರುವುದು ಮತ್ತು ಸಾಮ್ರಾಟ್ ಚೌಧರಿಯವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ಅವರ ಪ್ರತಿಜ್ಞೆಗೆ ಸಂದ ಜಯ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಬಿಹಾರದ ಮೇಲೆ ಹೊಂದಿರುವ ಹಿಡಿತಕ್ಕೆ ಸಾಮ್ರಾಟ್ ಚೌಧರಿ ಅವರು ಈಗ ಮುಖ್ಯ ಕೊಂಡಿಯಾಗಿದ್ದಾರೆ. 2026ರ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಸಮರದಲ್ಲಿ ಬಿಜೆಪಿಯನ್ನು ಮುನ್ನಡೆಸುವ ಗುರುತರ ಜವಾಬ್ದಾರಿ ಈಗ ಈ ‘ಸಮ್ರಾಟ್’ ಹೆಗಲ ಮೇಲಿದೆ.

