ನೋಯ್ಡಾ: ಕಳೆದ ಸೋಮವಾರ ನೋಯ್ಡಾದಲ್ಲಿ ಸಾವಿರಾರು ಕಾರ್ಮಿಕರು ನಡೆಸಿದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ, ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿ (DM) ಮೇಧಾ ರೂಪಮ್ ಅವರು ಔಟ್ಸೋರ್ಸಿಂಗ್ ಏಜೆನ್ಸಿಗಳು ಮತ್ತು ಗುತ್ತಿಗೆದಾರರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕಾ ಶಾಂತಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾದರೆ ಅಥವಾ ಕಾರ್ಮಿಕರು ಅಶಿಸ್ತಿನಿಂದ ವರ್ತಿಸಿದರೆ ಸಂಬಂಧಪಟ್ಟ ಏಜೆನ್ಸಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಅವರು ಗುಡುಗಿದ್ದಾರೆ.
ಮಂಗಳವಾರ ವಿವಿಧ ಕೈಗಾರಿಕಾ ಘಟಕಗಳ ಗುತ್ತಿಗೆದಾರರೊಂದಿಗೆ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಸರ್ಕಾರದ ಮಾರ್ಗಸೂಚಿಗಳನ್ನು ನೂರಕ್ಕೆ ನೂರರಷ್ಟು ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. “ಯಾವುದೇ ಏಜೆನ್ಸಿ ಅಥವಾ ಅದರ ಉದ್ಯೋಗಿಗಳು ಮತ್ತು ಕಾರ್ಮಿಕರು ಅಶಿಸ್ತಿನಿಂದ ವರ್ತಿಸಿದರೆ, ಆ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ (Blacklist) ಸೇರಿಸಲಾಗುವುದು ಮತ್ತು ಅವರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಮೇಧಾ ರೂಪಮ್ ಸಭೆಯಲ್ಲಿ ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನ ದರಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಡಿಎಂ ಸೂಚಿಸಿದ್ದಾರೆ. ಇದರಂತೆ ಅಕುಶಲ ಕಾರ್ಮಿಕರಿಗೆ ತಿಂಗಳಿಗೆ 13,690 ರೂ., ಅರೆ-ಕುಶಲ ಕಾರ್ಮಿಕರಿಗೆ 15,059 ರೂ. ಮತ್ತು ಕುಶಲ ಕಾರ್ಮಿಕರಿಗೆ 16,868 ರೂ. ವೇತನವನ್ನು ನಿಗದಿಪಡಿಸಲಾಗಿದೆ. ಈ ವೇತನವನ್ನು ಗುತ್ತಿಗೆದಾರರು ಯಾವುದೇ ವಿಳಂಬವಿಲ್ಲದೆ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು ಎಂದು ಅವರು ಆದೇಶಿಸಿದ್ದಾರೆ.
ಕೈಗಾರಿಕೆಗಳು, ಕಾರ್ಮಿಕರು ಮತ್ತು ಮಾಲೀಕರು ಒಬ್ಬರಿಗೊಬ್ಬರು ಪೂರಕವಾಗಿದ್ದಾರೆ ಎಂದು ಒತ್ತಿಹೇಳಿದ ಜಿಲ್ಲಾಧಿಕಾರಿಗಳು, ಕೈಗಾರಿಕೆಗಳ ಸುಗಮ ಕಾರ್ಯಾಚರಣೆಯು ಉದ್ಯೋಗಾವಕಾಶಗಳನ್ನು ಕಾಪಾಡುತ್ತದೆ ಎಂದು ತಿಳಿಸಿದರು. ಯಾವುದೇ ಅಡೆತಡೆಗಳು ಉಂಟಾದರೆ ಅದು ಕಾರ್ಮಿಕರ ಭವಿಷ್ಯ ಮತ್ತು ರಾಜ್ಯದ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ ಅವರು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಎಲ್ಲಾ ಪಾಲುದಾರರು ಪರಸ್ಪರ ಸಹಕಾರ ಹಾಗೂ ನಂಬಿಕೆಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

