ಕಡಬ: ಮಗನ ಬೈಕ್ ಡಿಕ್ಕಿಯಾಗಿ ತಾಯಿಗೆ ಗಂಭೀರ ಗಾಯ; ಸ್ವಂತ ತಾಯಿಯನ್ನೇ ಅಪಘಾತಕ್ಕೀಡುಮಾಡಿದ ಮಗನ ವಿರುದ್ಧ ದೂರು ದಾಖಲು!
ಕಡಬ: ಹೆತ್ತ ತಾಯಿಯನ್ನೇ ಮಗನೊಬ್ಬ ತನ್ನ ಅತಿವೇಗದ ಬೈಕ್ ಚಾಲನೆಯಿಂದ ಅಪಘಾತಕ್ಕೀಡುಮಾಡಿ ಗಾಯಗೊಳಿಸಿರುವ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಬೀರಂತಡ್ಕ ಎಂಬಲ್ಲಿ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಗ ದಯಾನಂದ್ ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಬಂಟ್ವಾಳ ತಾಲೂಕಿನ ಚೇತನಾ ಬಿ. ಎಂಬುವವರು ನೀಡಿರುವ ದೂರಿನ ಪ್ರಕಾರ, ಏಪ್ರಿಲ್ 4 ರಂದು ಸಂಜೆ ದಯಾನಂದ್ ತನ್ನ ತಾಯಿ ಪುಷ್ಪಾವತಿ ಅವರನ್ನು ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಅಜ್ಜಿಯನ್ನು ನೋಡಲು ಹೊರಟಿದ್ದರು. ಮನೆಯಿಂದ ಸ್ವಲ್ಪ ದೂರದ ಇಳಿಜಾರು ರಸ್ತೆ ಬಂದಾಗ, ರಸ್ತೆ ಸರಿ ಇಲ್ಲದ ಕಾರಣ ತಾಯಿಯನ್ನು ಬೈಕಿನಿಂದ ಕೆಳಗಿಳಿಸಿ ಸ್ವಲ್ಪ ದೂರ ನಡೆದುಕೊಂಡು ಬರುವಂತೆ ದಯಾನಂದ್ ತಿಳಿಸಿದ್ದರು.
ನಿರ್ಲಕ್ಷ್ಯದ ಚಾಲನೆಯೇ ಮುಳುವಾಯ್ತು: ತಾಯಿ ಪುಷ್ಪಾವತಿ ಅವರು ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ದಯಾನಂದ್ ತನ್ನ ಬೈಕನ್ನು ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಸ್ವಂತ ತಾಯಿಗೇ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಪುಷ್ಪಾವತಿ ಅವರ ತಲೆ ಮತ್ತು ಎದೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದೂರುದಾರೆ ಚೇತನಾ ಅವರಿಗೆ ಸಣ್ಣ ಮಗು ಇದ್ದ ಕಾರಣ ದೂರು ನೀಡಲು ತಡವಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಕಡಬ ಪೊಲೀಸರು ಬೈಕ್ ಸವಾರ ದಯಾನಂದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281 ಮತ್ತು 125(a) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

