ಕಾರವಾರ , ಏಪ್ರಿಲ್ 25 : ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ಬಸ್ ನಿಲ್ದಾಣದ ಎದುರಿರುವ ಹೋಟೆಲ್ವೊಂದರಲ್ಲಿ ಶುಕ್ರವಾರ ರಾತ್ರಿ 3-4 ಜನರ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದೆ. ನೂರಾನಿಗಲ್ಲಿ ನಿವಾಸಿ ಝಮೀರ್ ಅಹ್ಮದ್ ದರ್ಗಾವಾಲೆ (38) ಕೊಲೆಯಾದ ದುರ್ದೈವಿ.
ಮುಂಡಗೋಡಿನ ಹೋಟೆಲ್ನಲ್ಲಿ ನಡೆದ ಝಮೀರ್ ಅಹ್ಮದ್ ದರ್ಗಾವಾಲೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಈಗ ಹತ್ಯೆಗೀಡಾಗಿರುವ ಝುಮೇರ್ನನ್ನು ಸುಮಾರು ಒಂದೂವರೆ ವರ್ಷದ ಹಿಂದೆ ದುಷ್ಕರ್ಮಿಗಳು ಅಪಹರಿಸಿದ್ದರು. ಆ ಸಮಯದಲ್ಲಿ ಮುಂಡಗೋಡು ಪೊಲೀಸರು ಸಾಹಸಮಯ ಕಾರ್ಯಾಚರಣೆ ನಡೆಸಿ ಆತನನ್ನು ಹಂತಕರ ಕೈಯಿಂದ ಪ್ರಾಣಾಪಾಯದಿಂದ ರಕ್ಷಿಸಿದ್ದರು ಎಂದು ತಿಳಿದುಬಂದಿದೆ.
ಮೃತ ಝುಮೇರ್ ಮೇಲೆ ಬೆಟ್ಟಿಂಗ್ ಸೇರಿದಂತೆ ಒಟ್ಟು ಐದು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ತಿಳಿಸಿದ್ದಾರೆ. ಅಂದು ಅಪಹರಣದಿಂದ ಬದುಕುಳಿದಿದ್ದ ಝಮೀರ್, ಶುಕ್ರವಾರ ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ಝಮೀರ್ ಅವರು ಸ್ನೇಹಿತನೊಂದಿಗೆ ಹೋಟೆಲ್ಗೆ ಬಂದಿದ್ದಾಗ, ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಕುತ್ತಿಗೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಝುಮೇರ್ ಪ್ರಯತ್ನಿಸಿದರೂ ಸಾಧ್ಯವಾಗದೆ, ಹೋಟೆಲ್ನ ಅಡುಗೆ ಕೋಣೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಳೆಯ ದ್ವೇಷವೇ ಈ ಭೀಕರ ಕೊಲೆಗೆ ಮೂಲ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ನಡೆಸುತ್ತಿದ್ದಾರೆ.

