Monday, May 11, 2026
Homeತಾಜಾ ಸುದ್ದಿHyderabad : ಬಂದಿ ಸಂಜಯ್ ಬಗ್ಗೆ ಕೌಶಿಕ್ ರೆಡ್ಡಿ ವಿವಾದಾತ್ಮಕ ಹೇಳಿಕೆ ; ಶಾಸಕರ ಕಚೇರಿ...

Hyderabad : ಬಂದಿ ಸಂಜಯ್ ಬಗ್ಗೆ ಕೌಶಿಕ್ ರೆಡ್ಡಿ ವಿವಾದಾತ್ಮಕ ಹೇಳಿಕೆ ; ಶಾಸಕರ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ

ಹೈದರಾಬಾದ್ : ಕೇಂದ್ರ ಸಚಿವ ಬಂದಿ ಸಂಜಯ್ ಕುಮಾರ್ ಮತ್ತು ಬಿಆರ್‌ಎಸ್ ಶಾಸಕ ಪಾಡಿ ಕೌಶಿಕ್ ರೆಡ್ಡಿ ನಡುವಿನ ವೈಯಕ್ತಿಕ ವಾಗ್ದಾಳಿ ತೆಲಂಗಾಣ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರಿಗೆ ಡ್ರಗ್ ಟೆಸ್ಟ್ ಮಾಡುವಂತೆ ಬಂದಿ ಸಂಜಯ್ ಸವಾಲು ಹಾಕಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕೌಶಿಕ್ ರೆಡ್ಡಿ, “ಬಂದಿ ಸಂಜಯ್ ಅವರೇ ಮೊದಲು ಡ್ರಗ್ ಟೆಸ್ಟ್ ಮಾಡಿಸಿಕೊಳ್ಳಲಿ. ಅವರು ಡ್ರಗ್ ಮಿಶ್ರಿತ ತಂಬಾಕು ಉತ್ಪನ್ನಗಳನ್ನು ಸೇವಿಸುವುದರಿಂದಲೇ ಅವರ ತಲೆಕೂದಲು ಉದುರಿ ಹೋಗಿದೆ” ಎಂದು ವಿವಾದಾತ್ಮಕವಾಗಿ ಲೇವಡಿ ಮಾಡಿದ್ದರು.

ಈ ಹೇಳಿಕೆಯಿಂದ ಕೆರಳಿದ ಬಿಜೆಪಿ ಬೆಂಬಲಿಗರು ಗುರುವಾರ (ಮೇ 7, 2026) ಕರೀಮನಗರದಲ್ಲಿರುವ ಬಿಆರ್‌ಎಸ್ ಶಾಸಕ ಗಂಗುಲ ಕಮಲಾಕರ್ ಅವರ ಕ್ಯಾಂಪ್ ಆಫೀಸ್ ಮೇಲೆ ಮುಗಿಬಿದ್ದಿದ್ದಾರೆ. ಕೌಶಿಕ್ ರೆಡ್ಡಿ ಅಲ್ಲೇ ಇದ್ದಾರೆ ಎಂದು ಭಾವಿಸಿದ ಕಾರ್ಯಕರ್ತರು, ಕಚೇರಿಯ ಆವರಣದಲ್ಲಿದ್ದ ವಾಹನಗಳ ಗಾಜುಗಳನ್ನು ದೊಣ್ಣೆಗಳಿಂದ ಹೊಡೆದು ಧ್ವಂಸ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಈ ದಾಳಿಯನ್ನು ಬಿಆರ್‌ಎಸ್ ನಾಯಕ ಟಿ. ಹರೀಶ್ ರಾವ್ ತೀವ್ರವಾಗಿ ಖಂಡಿಸಿದ್ದಾರೆ. “ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವರ ಕ್ಷೇತ್ರದಲ್ಲಿಯೇ ಜನಪ್ರತಿನಿಧಿಗಳ ಕಚೇರಿಗೆ ರಕ್ಷಣೆ ಇಲ್ಲದಂತಾಗಿರುವುದು ದುರಂತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಹಿಂಸಾಚಾರಕ್ಕೆ ಅವಕಾಶವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದಾಳಿಕೋರರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!