ಬೆಂಗಳೂರು, ಮೇ 11: ಪ್ರಧಾನಿ ನರೇಂದ್ರ ಮೋದಿ ನಿನ್ನೆ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರಿ ಭದ್ರತಾ ಲೋಪ ಕಂಡುಬಂದಿದೆ. ಮೋದಿ ಪ್ರಯಾಣಿಸುತ್ತಿದ್ದ ಮಾರ್ಗದ ಬಳಿ ಸ್ಫೋಟಕಗಳು ಪತ್ತೆಯಾಗಿದ್ದು, ಇಡೀ ಪೊಲೀಸ್ ಇಲಾಖೆಯೇ ಆಘಾತಕ್ಕೀಡಾಗಿದೆ. ಘಟನೆಯ ವಿಶೇಷ ಫೋಟೋಗಳು ಟಿವಿ9 ಗೆ ಲಭ್ಯವಾಗಿವೆ.
ನಿನ್ನೆ (ಮೇ 10) ಪ್ರಧಾನಿ ಮೋದಿ ಅವರು ‘ಆರ್ಟ್ ಆಫ್ ಲಿವಿಂಗ್’ ಆಶ್ರಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಅವರು ಆಗಮಿಸುವ ಕೇವಲ ಎರಡು ಗಂಟೆಗಳ ಮೊದಲು, ಬೆಳಿಗ್ಗೆ 9 ಗಂಟೆ ಸುಮಾರಿಗೆ, ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ವಡೇರಹಳ್ಳಿ ಗೇಟ್ ಬಳಿ ಅನುಮಾನಾಸ್ಪದ ಪೆಟ್ಟಿಗೆಯೊಂದು ಪತ್ತೆಯಾಗಿತ್ತು. ಭದ್ರತೆಗೆ ನಿಯೋಜನೆಗೊಂಡಿದ್ದ ಪೇದೆಯೊಬ್ಬರು ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಈ ಬಾಕ್ಸ್ ಅನ್ನು ಗಮನಿಸಿದ್ದರು.
ಬಾಕ್ಸ್ನಲ್ಲಿ ಏನಿತ್ತು?
ಸುದ್ದಿ ತಿಳಿದ ಕೂಡಲೇ ಬಾಂಬ್ ನಿಷ್ಕ್ರಿಯ ದಳ (Bomb Squad) ಸ್ಥಳಕ್ಕೆ ಧಾವಿಸಿತ್ತು. ಬಾಕ್ಸ್ ಅನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಎರಡು ಜಿಲೆಟಿನ್ ಕಡ್ಡಿಗಳು, ನಾಲ್ಕು ಗಂಧದ ಕಡ್ಡಿಗಳು, ಒಂದು ಮ್ಯಾಚ್ ಬಾಕ್ಸ್ ಹಾಗೂ ಎರಡು ಬ್ಯಾಟರಿಗಳು ಕಂಡುಬಂದಿದ್ದವು. ಆರೋಪಿಯು ಸ್ಫೋಟಕಗಳನ್ನು ಬಾಕ್ಸ್ನಲ್ಲಿಟ್ಟು ಸುತ್ತಲೂ ಟೇಪ್ ಅಂಟಿಸಿದ್ದನು. ತಕ್ಷಣವೇ ಸ್ಫೋಟಕಗಳನ್ನು ವಶಕ್ಕೆ ಪಡೆದ ಪೊಲೀಸರು, ಇಡೀ ಮಾರ್ಗವನ್ನು ಮತ್ತೊಮ್ಮೆ ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಸಂಪೂರ್ಣ ಭದ್ರತೆ ಖಚಿತವಾದ ನಂತರವಷ್ಟೇ ಪ್ರಧಾನಿ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಈ ಗಂಭೀರ ಪ್ರಕರಣವನ್ನು ಭೇದಿಸಲು ಕಗ್ಗಲೀಪುರ ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುವುದರ ಜೊತೆಗೆ, ಬೆಂಗಳೂರು ದಕ್ಷಿಣ ಮತ್ತು ರಾಮನಗರದ ಕ್ವಾರಿಗಳಲ್ಲಿ ಬಳಸಲಾಗುವ ಜಿಲಾಟಿನ್ ಕಡ್ಡಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೋದಿ ಭೇಟಿಗೆ ಮುನ್ನಾದಿನ ಬಾಂಬ್ ನಿಷ್ಕ್ರಿಯ ದಳ ಆ ಪ್ರದೇಶವನ್ನು ಪರಿಶೀಲಿಸಿದ್ದರೂ, ಆ ಪೆಟ್ಟಿಗೆಯನ್ನು ಬೆಳಿಗ್ಗೆ ಅಲ್ಲಿ ಇರಿಸಿರಬಹುದು ಎಂಬ ಅನುಮಾನವಿದೆ. ಕೇಂದ್ರ ವಲಯ ಡಿಐಜಿ ಗಿರೀಶ್ ಈ ಬಗ್ಗೆ ಮಾಹಿತಿ ನೀಡಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದರು. ನಿನ್ನೆ, ಕಾನ್ಸ್ಟೆಬಲ್ನ ಸಮಯಪಾಲನೆಯಿಂದ ಒಂದು ಅನಾಹುತ ತಪ್ಪಿದೆ.
ಇದನ್ನು ಓದಿ : Puttur : ಗೋಳಿತ್ತೊಟ್ಟು ಬಳಿ ಕಾರು ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು, ಪತ್ನಿ ಗಂಭೀರ

