ಕಾಸರಗೋಡು : ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಕುಂಟಗೇರಡ್ಕದ ನಿವಾಸಿ ಜನಾರ್ದನ ಎಂಬವರ ಪುತ್ರಿ ಪ್ರಫುಲ್ಲಾ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತಮಿಳುನಾಡು ಮೂಲದ ಬ್ಯಾಂಕ್ ನೌಕರ ಮಣಿ ಎಂಬ ಯುವಕನ ಜೊತೆ ನಾಲ್ಕು ತಿಂಗಳ ಹಿಂದೆ ಪ್ರಫುಲ್ಲಾ ಅವರಿಗೆ ವಿವಾಹ ನಿಶ್ಚಯವಾಗಿತ್ತು. ಮುಂದಿನ ನವೆಂಬರ್ ತಿಂಗಳಿನಲ್ಲಿ ಇವರ ವಿವಾಹ ನಡೆಸಲು ಎರಡೂ ಕುಟುಂಬದವರು ತೀರ್ಮಾನಿಸಿದ್ದರು. ಆದರೆ, ಒಂದು ತಿಂಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಮಣಿ ಗಂಭೀರವಾಗಿ ಗಾಯಗೊಂಡು, ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಫಲಕಾರಿಯಾಗದೆ ಇತ್ತೀಚೆಗೆ ಮೃತಪಟ್ಟಿದ್ದರು.
ಭಾವಿ ಪತಿಯ ಸಾವಿನಿಂದ ಪ್ರಫುಲ್ಲಾ ತೀವ್ರ ಮಾನಸಿಕವಾಗಿ ಕುಗ್ಗಿದ್ದರು. ಮೇ 10ರಂದು ಮನೆಯವರೆಲ್ಲರೂ ವಿವಾಹ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸಮಯವನ್ನು ಬಳಸಿಕೊಂಡ ಅವರು, ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಸಾಯುವ ಮುನ್ನ ಪ್ರಫುಲ್ಲಾ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ “ಮಣಿಯವರ ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲೇ ತನ್ನ ಅಂತ್ಯಕ್ರಿಯೆಯನ್ನೂ ನಡೆಸುವಂತೆ” ಹೃದಯವಿದ್ರಾವಕವಾಗಿ ವಿನಂತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

