ಬೆಳ್ತಂಗಡಿ : ಬೆಳ್ತಂಗಡಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ರೋಗಿಯೊಬ್ಬರ ಮೃತದೇಹವು ಆಸ್ಪತ್ರೆಯ ಹೊರ ವರಾಂಡದಲ್ಲಿ ಪತ್ತೆಯಾಗಿದೆ. ಆಸ್ಪತ್ರೆಯ ಸಿಬ್ಬಂದಿಗಳ ತೀವ್ರ ನಿರ್ಲಕ್ಷ್ಯದಿಂದಲೇ ಈ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಮೃತರನ್ನು ಪುದುವೆಟ್ಟು ಗ್ರಾಮದ ಪೆಲತ್ತಾಜೆ ನಿವಾಸಿ ಅಚ್ಯುತ (42) ಎಂದು ಗುರುತಿಸಲಾಗಿದೆ.
ಅಚ್ಯುತ ಅವರು ತೀವ್ರ ಹೊಟ್ಟೆನೋವಿನ ಕಾರಣದಿಂದ ಮೇ 10ರಂದು ಮಧ್ಯಾಹ್ನ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ, ಇಂದು ಮುಂಜಾನೆ ಸುಮಾರು ಐದು ಗಂಟೆಯ ಹೊತ್ತಿಗೆ ಅವರು ಆಸ್ಪತ್ರೆಯಿಂದ ಒಂಟಿಯಾಗಿ ಹೊರಬಂದಿದ್ದಾರೆ. ಆಸ್ಪತ್ರೆಯ ಹಿಂಭಾಗದಲ್ಲಿರುವ ಡಯಾಲಿಸಿಸ್ ಕೇಂದ್ರದ ಸಮೀಪ ಅವರು ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಚಿಕಿತ್ಸೆಯಲ್ಲಿದ್ದ ರೋಗಿಯೊಬ್ಬರು ಯಾರ ಅರಿವಿಗೂ ಬಾರದೆ ಒಂಟಿಯಾಗಿ ಆಸ್ಪತ್ರೆಯಿಂದ ಹೊರಹೋಗುವಂತೆ ಮಾಡಿದ್ದು ಆಸ್ಪತ್ರೆಯ ಸಿಬ್ಬಂದಿಗಳ ಸ್ಪಷ್ಟ ಕರ್ತವ್ಯಲೋಪ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೃತ ಅಚ್ಯುತ ಅವರ ಕುಟುಂಬವು ಅತ್ಯಂತ ಬಡತನದಲ್ಲಿದ್ದು, ಅವರ ಪತ್ನಿ ಕೂಲಿ ಕೆಲಸ ಮಾಡಿ ಸಂಸಾರವನ್ನು ನಿಭಾಯಿಸುತ್ತಿದ್ದಾರೆ. ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿರುವ ಈ ಕುಟುಂಬದ ಆಧಾರಸ್ತಂಭವೇ ಈಗ ಇಲ್ಲದಂತಾಗಿದೆ.
ಇದನ್ನು ಓದಿ : Kumble : ಮದುವೆ ನಿಶ್ಚಯವಾಗಿದ್ದ ಯುವಕ ಅಪಘಾತದಲ್ಲಿ ಸಾವು ; ಮನನೊಂದು ನೇಣಿಗೆ ಶರಣಾದ ಯುವತಿ

