ಕಡಬ : ಮಗಳ ವಿವಾಹ ನಿಶ್ಚಿತಾರ್ಥಕ್ಕೆ ಕರೆಯಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತರಕಾರಿ ವ್ಯಾಪಾರಿಯೊಬ್ಬರನ್ನು ಅಂಗಡಿಯ ಬಳಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಮರದ ದೊಣ್ಣೆ ತೋರಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರಿನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಕೊಯಿಲ ಗ್ರಾಮದ ಹೇಂತಾರು ನಿವಾಸಿ ಮಹಮ್ಮದ್ ನವಾಜ್ (32) ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತೂರು ಪೇಟೆಯ ಬಿ.ಆರ್.ಕಾಂಪ್ಲೆಕ್ಸ್ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಅಬ್ದುಲ್ ಖಾದರ್ (58) ಅವರು ಸೆಪ್ಟೆಂಬರ್ 4ರಂದು ರಾತ್ರಿ ಅಂಗಡಿಯಲ್ಲಿದ್ದಾಗ ಸ್ಥಳಕ್ಕೆ ಬಂದ ನವಾಜ್, “ಮಗಳ ನಿಶ್ಚಿತಾರ್ಥಕ್ಕೆ ನನ್ನನ್ನು ಯಾಕೆ ಕರೆಯಲಿಲ್ಲ?” ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದಾನೆ. ಖಾದರ್ ಅವರು ಅಂಗಡಿಯೊಳಗೆ ಹೋಗಲು ಯತ್ನಿಸಿದಾಗ ಅಡ್ಡಗಟ್ಟಿ ಬೈದಿದ್ದಲ್ಲದೆ, ಕೈಯಲ್ಲಿದ್ದ ಮರದ ದೊಣ್ಣೆಯನ್ನು ಬಲವಾಗಿ ಎಸೆದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಖಾದರ್ ನೀಡಿದ ದೂರಿನಂತೆ ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : Moodbidri : 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದೈವಸ್ಥಾನ ಕಳವು ಪ್ರಕರಣದ ಆರೋಪಿ ತಮಿಳುನಾಡಿನಲ್ಲಿ ಬಂಧನ