ಪುತ್ತೂರು : ಕೆಲ ದಿನಗಳ ಹಿಂದೆ ನಗರದ ದರ್ಬೆಯ ಜನಸೇವಾ ಕೇಂದ್ರವೊಂದರಲ್ಲಿ ಗ್ರಾಹಕರು ಮತ್ತು ಅಂಗಡಿ ಮಾಲೀಕರ ನಡುವಿನ ಗಲಾಟೆಯ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆಯೊಡ್ಡಿದ್ದ ಪ್ರಕರಣದ 10 ಮಂದಿ ಆರೋಪಿಗಳಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.
ಜನಸೇವಾ ಕೇಂದ್ರದಲ್ಲಿ ಲ್ಯಾಮಿನೇಷನ್ ಮಾಡಲು ನೀಡಿದ್ದ ದಾಖಲೆ ಪತ್ರವೊಂದಕ್ಕೆ ಹಾನಿಯಾದ ವಿಚಾರದಲ್ಲಿ ಗ್ರಾಹಕರು ಮತ್ತು ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಿದ್ದ ಆರೋಪದಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ಆರೋಪಿಗಳಾದ ಅಬ್ದುಲ್ ನಿಯಾಝ್ ಪೆರ್ನೆ (26), ಮುಹಮ್ಮದ್ ನೌಶಾದ್ ದಾರಿಗುಡ್ಡೆ (32), ಆಲಂ ಕೋಲ್ಪೆ (45), ಮುಹಮ್ಮದ್ ಸುಹೈಲ್ ಬಿ. ಭಕ್ತಕೋಡಿ (28), ಅಬ್ದುಲ್ ಖಾದರ್ ಜಾಬಿರ್ ಬನ್ನೂರು (30), ಅಬ್ದುಲ್ ಕರೀಂ ಒಳಮೊಗರು ಕುಂಬ್ರ (39), ಯಾಕೂಬ್ ಅಂಗಡಿಮಜಲು (47), ಇಮ್ರಾನ್ ಅಹ್ಮದ್ ಅಲಂಗೂರುಡ್ಕ (40), ಮುಹಮ್ಮದ್ ರಿಫಾಝ್ ಕೂರ್ನಡ್ಕ (22) ಹಾಗೂ ಮುಹಮ್ಮದ್ ಇರ್ಷಾದ್ ಜಿ. ಜಾರತ್ತಾರ್ (40) ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿಗಳ ಪರ ವಕೀಲ ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದ ಮಂಡಿಸಿದ್ದರು.
ಇದನ್ನು ಓದಿ : Aturu : ಮಗಳ ವಿವಾಹ ನಿಶ್ಚಿತಾರ್ಥಕ್ಕೆ ಕರೆಯಲಿಲ್ಲವೆಂದು ತರಕಾರಿ ವ್ಯಾಪಾರಿಗೆ ಅಸಭ್ಯವಾಗಿ ಬೈದು ಕೊಲೆ ಬೆದರಿಕೆ!