ಬಂಟ್ವಾಳ : ಮೃತ ದುರ್ದೈವಿಯನ್ನು ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ನಿವಾಸಿ, ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಅವಿವಾಹಿತ ಯುವಕ ಹರೀಶ್ ಟಿ. (38) ಎಂದು ಗುರುತಿಸಲಾಗಿದೆ. ಆಗಸ್ಟ್ 16ರಂದು ಎಂದಿನಂತೆ ಕೆಲಸ ಮುಗಿಸಿ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಬಂದಿದ್ದ ಹರೀಶ್, ಊಟ ಮಾಡಿ ಮಲಗಿದ್ದರು. ಆದರೆ, ಆಗಸ್ಟ್ 17ರ ಬೆಳಿಗ್ಗೆ ಕುಟುಂಬಸ್ಥರು ಎದ್ದು ನೋಡಿದಾಗ ಹರೀಶ್ ಮನೆಯಲ್ಲಿ ಇರಲಿಲ್ಲ.
ಹರೀಶ್ ಎಲ್ಲಿಗೆ ಹೋಗಿರಬಹುದು ಎಂದು ಕುಟುಂಬಸ್ಥರು ಹುಡುಕಾಡುತ್ತಿದ್ದ ವೇಳೆ, ಬೆಳಿಗ್ಗೆ ಸುಮಾರು 7:30ರ ಹೊತ್ತಿಗೆ ಪುರುಷೋತ್ತಮ್ ಎಂಬುವವರು ಕುಟುಂಬಕ್ಕೆ ಕರೆ ಮಾಡಿದ್ದಾರೆ. ತಂತ್ರಿಬೆಟ್ಟು ಟ್ರಾನ್ಸ್ಫಾರ್ಮರ್ ಬಳಿ ಭಾರೀ ಶಬ್ದ ಕೇಳಿಸಿದ್ದು, ವಿದ್ಯುತ್ ಸಮಸ್ಯೆಯಾಗಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಹರೀಶ್ ಅವರ ಬೈಕ್ ನಿಂತಿದ್ದು, ಹರೀಶ್ ಟ್ರಾನ್ಸ್ಫಾರ್ಮರ್ ಬಳಿ ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಪರಿಶೀಲಿಸಿದಾಗ ಟ್ರಾನ್ಸ್ಫಾರ್ಮರ್ ಕೆಳಗೆ ಬಿದ್ದಿದ್ದ ಹರೀಶ್ ಮೃತಪಟ್ಟಿರುವುದು ದೃಢಪಟ್ಟಿದೆ.
ಬೆಳಿಗ್ಗೆ 6:30 ರಿಂದ 7:30ರ ನಡುವಿನ ಸಮಯದಲ್ಲಿ ಹರೀಶ್ ಟ್ರಾನ್ಸ್ಫಾರ್ಮರ್ ಬಳಿ ತೆರಳಿರಬಹುದು ಹಾಗೂ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಆದರೆ, ನಸುಕಿನ ವೇಳೆಯಲ್ಲಿ ಆತ ಟ್ರಾನ್ಸ್ಫಾರ್ಮರ್ ಬಳಿ ಏಕೆ ಹೋಗಿದ್ದ ಎಂಬುದು ನಿಗೂಢವಾಗಿಯೇ ಉಳಿದಿದೆ. ಮೃತನ ಸಹೋದರ ದಿನೇಶ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : Bantwal : ಬಸ್ನಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದ 53 ವರ್ಷದ ಉಮೇಶ್ ಅರೆಸ್ಟ್!