ಕಲಬುರಗಿ : ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ತಂದೆಯೆಂಬ ಕರುಳಿನ ಸಂಬಂಧವನ್ನೇ ನಾಚಿಸುವಂತಹ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿಯ ಮೇಲಿದ್ದ ಆಕ್ರೋಶವನ್ನು ವ್ಯಕ್ತಿಯೊಬ್ಬ ತನ್ನ 4 ವರ್ಷದ ಮುಗ್ಧ ಕಂದಮ್ಮನ ಮೇಲೆ ತೀರಿಸಿಕೊಂಡು, ಜಲಾಶಯಕ್ಕೆ ಎಸೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದ ನಿವಾಸಿ ಸೋಮರಾವ್ ಹೂಗಾರ್ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಈತನಿಗೆ ಪತ್ನಿ ಕಲ್ಪನಾ ಜೊತೆ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆ ನಡೆಯುತ್ತಿತ್ತು. ಘಟನೆ ನಡೆದ ದಿನವೂ ದಂಪತಿ ನಡುವೆ ತೀವ್ರ ಜಗಳ ನಡೆದಿದ್ದು, ಇದರಿಂದ ತೀವ್ರ ಸಿಟ್ಟಿಗೆದ್ದ ಸೋಮರಾವ್, ತನ್ನ 4 ವರ್ಷದ ಪುತ್ರ ಗುಂಡೇಶ್ನನ್ನು ಆಟವಾಡಿಸುತ್ತೇನೆ ಎಂದು ಹೇಳಿ ಮನೆಯಿಂದ ಹೊರಗೆ ಎತ್ತಿಕೊಂಡು ಹೋಗಿದ್ದಾನೆ.
ಮಗುವನ್ನು ಕರೆದೊಯ್ದ ಆತ ಸಮೀಪದ ನಾಗರಾಳ ಜಲಾಶಯದ ಬಳಿ ಹೋಗಿ, ಕಣ್ಣೆದುರೇ ಮಗುವನ್ನು ನೇರವಾಗಿ ನೀರಿಗೆ ಎಸೆದು ಕ್ರೂರವಾಗಿ ಹತ್ಯೆಗೈದಿದ್ದಾನೆ. ಪತಿ ಮನೆಗೆ ವಾಪಸ್ ಬಾರದಿದ್ದಾಗ ಹಾಗೂ ಮಗು ಕಾಣೆಯಾದ ವಿಷಯ ತಿಳಿದ ತಾಯಿ ಕಲ್ಪನಾ ಗಾಬರಿಗೊಂಡು ಚಿಂಚೋಳಿ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ತಕ್ಷಣ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಿಂಚೋಳಿ ಪೊಲೀಸರು ಕಾರ್ಯಾಚರಣೆ ನಡೆಸಿ ನಾಗರಾಳ ಜಲಾಶಯದಿಂದ 4 ವರ್ಷದ ಬಾಲಕ ಗುಂಡೇಶ್ನ ಮೃತದೇಹವನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಕಂದಮ್ಮನ ಜೀವ ತೆಗೆದ ಪಾಪಿ ತಂದೆ ಸೋಮರಾವ್ ಹೂಗಾರ್ನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನು ಓದಿ : Nepal Floods : ಅಪ್ಪನ 60ನೇ ಹುಟ್ಟುಹಬ್ಬ ಆಚರಿಸಲು ಹೋಗಿ ಪ್ರವಾಹದಲ್ಲಿ ಸಿಲುಕಿದ ಪೋಷಕರು: ಕಣ್ಣೀರಿಟ್ಟ ಹೆಣ್ಣುಮಕ್ಕಳು.