ಮುಂಬೈ: ರಾಜಕೀಯ ರ್ಯಾಲಿಗಳ ಅಬ್ಬರಕ್ಕೆ ಜನಸಾಮಾನ್ಯರು ರಸ್ತೆಯಲ್ಲಿ ಪರದಾಡುವುದು ಹೊಸದೇನಲ್ಲ. ಆದರೆ ಮುಂಬೈನಲ್ಲಿ ಸಚಿವರೊಬ್ಬರಿಗೆ ಮಹಿಳೆಯೊಬ್ಬರು ಚಳಿ ಬಿಡಿಸಿರುವ ಘಟನೆ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಮಹಿಳಾ ಮೀಸಲಾತಿ ಬಗ್ಗೆ ಸಚಿವ ಗಿರೀಶ್ ಮಹಾಜನ್ ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದರೆ, ಇತ್ತ ಅದೇ ಮೀಸಲಾತಿಯ ಹಕ್ಕಿನಿಂದ ಮಹಿಳೆಯೊಬ್ಬರು ರೊಚ್ಚಿಗೆದ್ದು ಸಚಿವರಿಗೆ ಬೆವರಿಳಿಸಿದ್ದಾರೆ.
ನಡೆದಿದ್ದೇನು? ಮುಂಬೈನ ವರ್ಲಿಯ ಜಾಂಬೋರಿ ಮೈದಾನದಿಂದ ಡೋಮ್ವರೆಗೆ ಮಹಾಯುತಿ ಮೈತ್ರಿಕೂಟದ (ಬಿಜೆಪಿ ನೇತೃತ್ವದ) ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು. ಕೇಂದ್ರದಲ್ಲಿ ಮಹಿಳಾ ಮೀಸಲಾತಿ ಮಸೂದೆ ತಿರಸ್ಕೃತಗೊಂಡಿದ್ದನ್ನು ಖಂಡಿಸಿ ಸಾವಿರಾರು ಮಹಿಳೆಯರು ಬೀದಿಗಿಳಿದಿದ್ದರು. ಸಂಜೆ 5 ಗಂಟೆಗೆ ಶುರುವಾಗಬೇಕಿದ್ದ ಈ ರ್ಯಾಲಿ ವಿಳಂಬವಾದ ಕಾರಣ ಇಡೀ ವರ್ಲಿ ಭಾಗ ಸ್ತಬ್ಧವಾಗಿತ್ತು.
ತಾಯಿಯ ಆಕ್ರೋಶದ ಮುಂದೆ ಸಚಿವರು ಸೈಲೆಂಟ್! ಇದೇ ಟ್ರಾಫಿಕ್ನಲ್ಲಿ ಮಹಿಳೆಯೊಬ್ಬರು ತನ್ನ ಮಗುವನ್ನು ಶಾಲೆಯಿಂದ ಕರೆತರಲು ಹೋಗುತ್ತಿದ್ದಾಗ ಗಂಟೆಗಟ್ಟಲೆ ಸಿಲುಕಿಕೊಂಡಿದ್ದರು. ತಾಳ್ಮೆ ಕಳೆದುಕೊಂಡ ಆ ಮಹಿಳೆ ಕಾರಿನಿಂದ ಕೆಳಗಿಳಿದು ನೇರವಾಗಿ ಮೆರವಣಿಗೆಯ ಮಧ್ಯಕ್ಕೆ ನುಗ್ಗಿದ್ದಾರೆ. ಅಲ್ಲಿ ಭಾಷಣದ ಸಿದ್ಧತೆಯಲ್ಲಿದ್ದ ಸಚಿವ ಗಿರೀಶ್ ಮಹಾಜನ್ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.
- “ಇಲ್ಲಿ ನೂರಾರು ಜನರು ಕಾಯುತ್ತಿದ್ದಾರೆ. ಪಕ್ಕದಲ್ಲೇ ಖಾಲಿ ಮೈದಾನವಿದ್ದರೂ ರಸ್ತೆಯಲ್ಲೇಕೆ ಮೆರವಣಿಗೆ ಮಾಡುತ್ತೀರಾ?” ಎಂದು ಮಹಿಳೆ ಕಿರುಚಿದ್ದಾರೆ.
- “ಇಲ್ಲಿಂದ ಮೊದಲು ಜಾಗ ಖಾಲಿ ಮಾಡಿ (Get out of here!)” ಎಂದು ಸಚಿವರಿಗೆ ಮತ್ತು ಪ್ರತಿಭಟನಾಕಾರರಿಗೆ ಖಡಕ್ ಆಗಿ ಹೇಳಿದ್ದಾರೆ.
- “ನಿಮ್ಮ ಈ ಭಾಷಣ ಮತ್ತು ಶೋಕಿಯಿಂದ ನಮಗೆ ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ, ಜನರಿಗೆ ತೊಂದರೆ ಕೊಡೋದನ್ನು ನಿಲ್ಲಿಸಿ” ಎಂದು ಎಲ್ಲರ ಎದುರೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಚಿವರು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆಕೆ ಮಾತ್ರ “ಮೊದಲು ಈ ರಸ್ತೆ ಕ್ಲಿಯರ್ ಮಾಡಿ, ಆಮೇಲೆ ಮೀಸಲಾತಿ ಬಗ್ಗೆ ಮಾತಾಡಿ” ಎಂದು ಗುಡುಗಿದ್ದಾರೆ. ಪೊಲೀಸರು ಆಕೆಯನ್ನು ತಡೆಯಲು ಬಂದಾಗ, “ನನಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಬೇಕು” ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಪೊಲೀಸರು ಆಕೆಯನ್ನು ಸಮಾಧಾನಪಡಿಸಿ ಪಕ್ಕಕ್ಕೆ ಕರೆದೊಯ್ದಿದ್ದಾರೆ.
ನೆಟ್ಟಿಗರ ಫುಲ್ ಸಪೋರ್ಟ್ ಸದ್ಯ ಈ ವಿಡಿಯೋ ‘ಫರ್ ಕೆ ಕಲೇಶ್’ ಎಂಬ ಎಕ್ಸ್ (X) ಖಾತೆಯಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಧೈರ್ಯಕ್ಕೆ ಭೇಷ್ ಎನ್ನುತ್ತಿದ್ದಾರೆ. ಭಾಷಣ ಮಾಡುವುದು ಸುಲಭ, ಆದರೆ ಜನರ ಸಮಸ್ಯೆಗಳನ್ನು ಅರಿತುಕೊಳ್ಳುವುದು ಮುಖ್ಯ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

