ಮಣಿಪಾಲ : ಮಣಿಪಾಲದ ಅತ್ರಾಡಿ ಸಮೀಪದ ಕಬ್ಯಾಡಿ ಅರ್ಮಾನ್ ಇಲಿ ಮದ್ದಿನ ಕಾರ್ಖಾನೆ ಬಳಿ ಸೋಮವಾರ ಮಧ್ಯಾಹ್ನ ಬೈಕ್ ಮತ್ತು ಟೆಂಪೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಹಿರೇಗ ಗ್ರಾಮದ ನಿವಾಸಿ ಭಾಸ್ಕರ್ ನಾಯಕ್ (70) ಎಂದು ಗುರುತಿಸಲಾಗಿದೆ.
ಅತ್ರಾಡಿಯಿಂದ ಮೂಡುಬೆಳ್ಳೆ ಕಡೆಗೆ ಸಾಗುತ್ತಿದ್ದ 407 ಟೆಂಪೋ ಮತ್ತು ಎದುರಿನಿಂದ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ನಲ್ಲಿದ್ದ ಇಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಭಾಸ್ಕರ್ ನಾಯಕ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೈಕ್ನ ಹಿಂಬದಿ ಸವಾರನ ಕಾಲು ಕತ್ತರಿಸಲ್ಪಟ್ಟಿದ್ದು, ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

