ಉಡುಪಿ, ಆಗಸ್ಟ್ 28 : ಜುಲೈ 2ರಂದು ಅಪರಿಚಿತ ವ್ಯಕ್ತಿಯೊಬ್ಬ ಉಡುಪಿಯ ದೂರುದಾರರಿಗೆ ಹಿಂದಿಯಲ್ಲಿ ವಾಟ್ಸಾಪ್ ಕರೆ ಮಾಡಿ, “ನಿಮ್ಮ ಮಗ ಅಜಿತ್ ಪಡಿಯಾರ್ ನನ್ನೊಂದಿಗೆ ವಜ್ರದ ವ್ಯಾಪಾರ (Diamond Business) ಮಾಡಿದ್ದು, 5 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾನೆ, ಆ ಹಣವನ್ನು ನೀವು ತಕ್ಷಣ ಕೊಡಬೇಕು” ಎಂದು ಬೆದರಿಕೆ ಹಾಕಿದ್ದನು. ಆದರೆ ದೂರುದಾರರು, ತಮ್ಮ ಪುತ್ರ ಅಜಿತ್ 8 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂದು ತಿಳಿಸಿ ಹಣ ನೀಡಲು ನಿರಾಕರಿಸಿದ್ದರು. ಅಷ್ಟಕ್ಕೇ ಸುಮ್ಮನಾಗದ ದುಷ್ಕರ್ಮಿಗಳು, ದುಬೈನಲ್ಲಿದ್ದ ದೂರುದಾರರ ಎರಡನೇ ಪುತ್ರ ಅಮಿತ್ಗೆ ಕರೆ ಮಾಡಿ, “5 ಲಕ್ಷ ರೂ. ಹಣ ನೀಡದಿದ್ದರೆ ಊರಿನಲ್ಲಿರುವ ನಿನ್ನ ಅಣ್ಣನ ಹೆಂಡತಿಗೆ ತೊಂದರೆ ಕೊಡುತ್ತೇವೆ” ಎಂದು ನೇರವಾಗಿ ಜೀವ ಬೆದರಿಕೆ ಹಾಕಿದ್ದರು.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐಪಿಎಸ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಪಿ. ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು. ತನಿಖಾಧಿಕಾರಿ ಪಿಎಸ್ಐ-2 ರತ್ನಾಕರ್ ಕೆ. ಹಾಗೂ ಸಿಬ್ಬಂದಿಗಳಾದ ಪ್ರಸನ್ನ ಸಿ., ಜೀವನ್ ಕುಮಾರ್, ಮಲ್ಲಯ್ಯ ಹಿರೇಮಠ ಮತ್ತು ಹೇಮಂತ್ ಕುಮಾರ್ ಅವರನ್ನೊಳಗೊಂಡ ತಂಡವು ಜಾಲ ಬೀಸಿ ಸಂತೋಷ್ ನಗರದ ಸಾಜಿದ್ ಹಾಗೂ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸೈಯದ್ ಸೈಫ್ ಅಹ್ಮದ್ (40) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.