Udupi : ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಇಂದು ಬೆಳಗ್ಗೆ ಹಮ್ಮಿಕೊಂಡಿದ್ದ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುಂದಾಪುರ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಸೀರ್ ಹುಸೇನ್ (58) ಒಮ್ಮೆಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಓಟದ ಮಧ್ಯದಲ್ಲೇ ಅಸ್ವಸ್ಥಗೊಂಡ ಅವರನ್ನು ತಕ್ಷಣ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಅವರನ್ನು ಮೃತ ಎಂದು ಘೋಷಿಸಿದರು. ಈ ಆಘಾತಕಾರಿ ಸುದ್ದಿ ಇಡೀ ಉಡುಪಿ ಪೊಲೀಸ್ ಇಲಾಖೆಯನ್ನು ಶೋಕಕ್ಕೆ ದೂಡಿದೆ.
ನಾಸೀರ್ ಹುಸೇನ್ ದೀರ್ಘ ಕಾಲ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸಿದ್ದರು. ಅಮಾಸೆಬೈಲು, ಕುಂದಾಪುರ ನಗರ, ಕುಂದಾಪುರ ಸಂಚಾರ ಠಾಣೆ, ಶಂಕರನಾರಾಯಣ, ಕಾರ್ಕಳ ಗ್ರಾಮಾಂತರ ಠಾಣೆ ಸೇರಿ ವಿವಿಧ ಕಡೆ ಕರ್ತವ್ಯ ನಿರ್ವಹಿಸಿ ತಮ್ಮ ಪ್ರಾಮಾಣಿಕ ಸೇವೆಗೆ ಹೆಸರಾಗಿದ್ದರು. 58 ವರ್ಷ ವಯಸ್ಸಿನ ಅವರು ಇನ್ನೇನು ನಿವೃತ್ತಿ ಹತ್ತಿರ ಬಂದಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ತೀವ್ರ ಸಂತಾಪ ಮೂಡಿಸಿದೆ.
ಹೃದಯಾಘಾತ ಅಥವಾ ತೀವ್ರ ದೈಹಿಕ ಅಸ್ವಸ್ಥತೆ ಕಾರಣ ಆಗಿರಬಹುದು ಎಂದು ಪ್ರಾಥಮಿಕ ವೈದ್ಯಕೀಯ ಅಭಿಪ್ರಾಯ ತಿಳಿದುಬಂದಿದ್ದು ನಿಖರ ಮರಣ ಕಾರಣ ಪೋಸ್ಟ್ಮಾರ್ಟಮ್ ವರದಿ ಬಳಿಕ ಸ್ಪಷ್ಟವಾಗಲಿದೆ. ಮ್ಯಾರಥಾನ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಸಿಬ್ಬಂದಿಗೆ ಸಾಕಷ್ಟು ವೈದ್ಯಕೀಯ ಸೌಲಭ್ಯ ಇದ್ದಿತೇ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.
ನಾಸೀರ್ ಹುಸೇನ್ ಅವರ ಸಾವಿನ ಸುದ್ದಿ ಕೇಳಿ ಉಡುಪಿ ಮತ್ತು ಕುಂದಾಪುರ ಭಾಗದ ಸಹ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಜನ ಆಘಾತ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಕ್ಕೆ ಪೊಲೀಸ್ ಇಲಾಖೆ ಸಂತಾಪ ತಿಳಿಸಿದ್ದು ಅಗತ್ಯ ಸಹಾಯ ಒದಗಿಸಲು ಮುಂದೆ ಬಂದಿದೆ.

