ಆನೇಕಲ್ : ಆನೇಕಲ್ ಪೊಲೀಸ್ ಉಪವಿಭಾಗದ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮುಗಳೂರು ಕೆರೆಯಲ್ಲಿ ಈ ಮಾನವ ಕಳೇಬರ ಪತ್ತೆಯಾಗಿದೆ. ಶುಕ್ರವಾರ ಕುರಿಗಾಹಿಗಳು ಎಂದಿನಂತೆ ಕೆರೆಯಂಗಳದಲ್ಲಿ ಕುರಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಲ್ಲಿ ಮನುಷ್ಯನ ತಲೆಬುರುಡೆ ಮತ್ತು ಮೂಳೆಗಳು ಬಿದ್ದಿರುವುದನ್ನು ಕಂಡು ದಿಕ್ಕೆಟ್ಟಿದ್ದಾರೆ. ತಕ್ಷಣವೇ ಅವರು ಸರ್ಜಾಪುರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಅಡಿಷನಲ್ ಎಸ್ಪಿ) ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಗೋಪಾಲ್ ನಾಯಕ್ ಹಾಗೂ ಸರ್ಜಾಪುರ ಪೊಲೀಸ್ ಇನ್ಸ್ಪೆಕ್ಟರ್ ಮಹೇಂದ್ರ ಕುಮಾರ್ ಅವರನ್ನೊಳಗೊಂಡ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದೆ. ಸ್ಥಳ ಪರಿಶೀಲನೆ ನಡೆಸಿದ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಅವರು, ಕೆರೆಯಂಗಳದಲ್ಲಿ ಮಾನವ ಮೂಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅವುಗಳನ್ನು ನಾಯಿಗಳು ಎಳೆದಾಡಿರುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ.
ಅತ್ಯಂತ ಪ್ರಮುಖವಾಗಿ, ಕಳೇಬರ ಸಿಕ್ಕ ಜಾಗದಲ್ಲೇ ಮಹಿಳೆಯ ಸೀರೆಯೊಂದು ದೊರೆತಿರುವುದರಿಂದ ಇದು ಯಾವುದೋ ಒಬ್ಬ ಮಹಿಳೆಯ ಅಸ್ಥಿಪಂಜರ ಇರಬಹುದು ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ. ಕೊಲೆ ಮಾಡಿ ತಂದು ಇಲ್ಲಿ ಸಾಕ್ಷ್ಯ ನಾಶಕ್ಕೆ ಎಸೆಯಲಾಗಿದೆಯೇ ಅಥವಾ ಬೇರೇನಾದರೂ ಕರಾಳ ರಹಸ್ಯವಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ಹಾಗೂ ಸೋಕೋ (SOCO) ತಂಡ ಆಗಮಿಸಿದ್ದು, ತಲೆಬುರುಡೆ ಹಾಗೂ ಮೂಳೆಗಳನ್ನು ವಶಕ್ಕೆ ಪಡೆದು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಿಸ್ಟರಿ ಭೇದಿಸಲು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನು ಓದಿ : Dhule Double Murder Case : ಹೆಂಡತಿ ಮುಂದೆ ಬೈದಿದ್ದಕ್ಕೆ ಹೆತ್ತ ತಂದೆ-ತಾಯಿಯನ್ನೇ ಜಜ್ಜಿ ಕೊಂದ ಮಗ!



