ಮುಂಬೈ: ಮಹಾರಾಷ್ಟ್ರದ ಧುಲೆ ಜಿಲ್ಲೆಯ ಶಿರ್ಪುರ ಠಾಣಾ ವ್ಯಾಪ್ತಿಯಲ್ಲಿ ಈ ಅತಿ ಕರಾಳ ದುರಂತ ಸಂಭವಿಸಿದೆ. ರಂಜುದೇವಿ ಮಹತೋ (52) ಮತ್ತು ಇಂದಾರಾಮ್ ಮಹತೋ (58) ಮೃತಪಟ್ಟ ದುರ್ದೈವಿ ದಂಪತಿಗಳಾಗಿದ್ದಾರೆ. ಹೆತ್ತವರನ್ನೇ ಬಲಿಪಡೆದ ಪಾಪಿ ಮಗ ಚಂದನ್ ಇಂದಾರಾಮ್ ಮಹತೋ (28) ಎಂಬಾತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ರಂಜುದೇವಿ ಮತ್ತು ಇಂದಾರಾಮ್ ದಂಪತಿಗಳು ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮನೆಗೆ ಮರಳಿದ್ದರು. ಈ ವೇಳೆ ಮಗ ಚಂದನ್ನನ್ನು ಆತನ ಪತ್ನಿಯ ಎದುರೇ ಪೋಷಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಆತನ ಜವಾಬ್ದಾರಿರಹಿತ ನಡವಳಿಕೆ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಹೆಂಡತಿಯ ಮುಂದೆ ತಂದೆ-ತಾಯಿ ತನ್ನನ್ನು ನಿಂದಿಸಿದರು ಎಂಬುದನ್ನೇ ದೊಡ್ಡ ಅವಮಾನ ಎಂದುಕೊಂಡ ಚಂದನ್ ತೀವ್ರ ಆಕ್ರೋಶಗೊಂಡಿದ್ದಾನೆ.
ಕೋಪ ನೆತ್ತಿಗೇರಿದ ಆತ, ಮನೆಯಲ್ಲಿದ್ದ ಕುಟ್ಟಾಣಿ (ಒನಕೆ/Pestle) ತೆಗೆದುಕೊಂಡು ಹೆತ್ತ ತಂದೆ ಮತ್ತು ತಾಯಿ ಇಬ್ಬರ ತಲೆಗೆ ಬಲವಾಗಿ ಜಜ್ಜಿದ್ದಾನೆ. ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವಗೊಂಡ ದಂಪತಿಗಳು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ನರಹಂತಕ ಮಗ ಚಂದನ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಮನೆಯೊಳಗಿನ ಕಿರುಚಾಟ ಮತ್ತು ಗದ್ದಲ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಆರೋಪಿಯನ್ನು ಹಿಡಿದು ಶಿರ್ಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.
ಇದನ್ನು ಓದಿ : Moodbidri : ಬ್ರಿಜಾ ಕಾರಿನಲ್ಲಿ ಜಾನುವಾರುಗಳ ಕ್ರೂರ ಸಾಗಾಟ; ಪೊಲೀಸರನ್ನು ಕಂಡು ಎಸ್ಕೇಪ್ ಆಗಲು ಯತ್ನಿಸಿದ ಹಳೇ ಕಿಲಾಡಿಗಳ ಬಂಧನ!



