ಬೆಂಗಳೂರು : ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆಮರದಹಳ್ಳಿಯ ರೈತ ತಿಮ್ಮರಾಯಪ್ಪ (48) ಎಂಬಾತನೇ ಹೆಣ್ಣು ಹೆತ್ತ ಕರುಳನ್ನು ಬಲಿಪಡೆದ ಪಾಪಿ ತಂದೆ. ಈತನ 17 ವರ್ಷದ ಮಗಳು ಟಿ. ಮೇಘನಾ, ತನ್ನ ತಾಯಿ ನಿರ್ಮಲಾ ಅವರ ಆಪ್ತ ಸಂಬಂಧಿಯಾದ ಎಲೆಕ್ಟ್ರಿಷಿಯನ್ ಒಬ್ಬನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಈ ಪ್ರೇಮ ವಿವಾಹಕ್ಕೆ ತಾಯಿ ಸಂಪೂರ್ಣ ಸಪೋರ್ಟ್ ಮಾಡಿದ್ದರೆ, ತಂದೆ ತಿಮ್ಮರಾಯಪ್ಪ ತೀವ್ರವಾಗಿ ವಿರೋಧಿಸುತ್ತಿದ್ದನು. ಇದೇ ವಿಚಾರಕ್ಕೆ ಏಪ್ರಿಲ್ 16 ರಂದು ತೋಟಕ್ಕೆ ಕರೆಸಿಕೊಂಡ ತಂದೆ, ಮಗಳ ಜೊತೆ ಜಗಳವಾಡಿ ಆಕ್ರೋಶದ ಭರದಲ್ಲಿ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.
ಮಗಳು ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ ಮೊದಲು ತೋಟದ ಬಾವಿಗೆ ಎಸೆದಿದ್ದ ಪಾಪಿ, ಸಂಜೆ ವೇಳೆ ಹೆಣ ಮೇಲೆ ತೇಲಿ ಬರುತ್ತದೆ ಎಂಬ ಭಯದಿಂದ ಮತ್ತೆ ಬಾವಿಗೆ ಇಳಿದು ಮೃತದೇಹವನ್ನು ಹೊರಗೆ ಎಳೆದಿದ್ದಾನೆ. ತದನಂತರ ಕತ್ತಲಲ್ಲಿ ಶವವನ್ನು ಹೊತ್ತುಕೊಂಡು ಹೋಗಿ ಹತ್ತಿರದ ಒಣಗಿದ ಕೆರೆಯಂಗಳದಲ್ಲಿ ಯಾರಿಗೂ ತಿಳಿಯದಂತೆ ಮಣ್ಣು ಮುಚ್ಚಿ ಹೂತುಹಾಕಿದ್ದಾನೆ. ಮರುದಿನ ಏನೂ ತಿಳಿಯದವನಂತೆ ಪತ್ನಿಯೊಂದಿಗೆ ಸೇರಿ ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ನರಹಂತಕ, ಒಂದು ವಾರದ ಬಳಿಕ ತಾನೂ ಕೂಡ ಬೈಕ್ ಮತ್ತು ಹಣದೊಂದಿಗೆ ನಾಪತ್ತೆಯಾಗಿ ತಲೆಮರೆಸಿಕೊಂಡಿದ್ದನು.
ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಕೇಸ್ ಸಂಪೂರ್ಣ ತಣ್ಣಗಾಗಿತ್ತು. ಆದರೆ ಮೇ 15 ರಂದು ಪೊಲೀಸರಿಗೆ ಸಿಕ್ಕ ಒಂದು ಪಕ್ಕಾ ಇನ್ಫಾರ್ಮೇಷನ್ ಇಡೀ ಕೇಸ್ಗೆ ಬ್ರೇಕ್ಥ್ರೂ ನೀಡಿದೆ. ತಿಮ್ಮರಾಯಪ್ಪ ತನ್ನ ಹಳ್ಳಿಯಿಂದ 3 ಕಿಲೋಮೀಟರ್ ದೂರದಲ್ಲಿರುವ ಸ್ನೇಹಿತನ ಮನೆಗೆ ಬಂದು ಹೋಗುತ್ತಿದ್ದ ಮಾಹಿತಿ ಸಿಕ್ಕಿದೆ. ಪೊಲೀಸರು ತನಿಖೆ ನಡೆಸಿದಾಗ, ಈತ ಬೈಕಿನಲ್ಲಿ ಬೇರೆ ಬೇರೆ ತಾಲೂಕು ಸುತ್ತುತ್ತಾ, ದೇವಸ್ಥಾನ ಹಾಗೂ ಬಸ್ ಸ್ಟ್ಯಾಂಡ್ಗಳಲ್ಲಿ ಮಲಗುತ್ತಿದ್ದ ಕರಾಳ ಸತ್ಯ ಬಯಲಾಗಿದೆ. ಅಷ್ಟೇ ಅಲ್ಲದೆ, ಕೊಲೆ ಕೇಸಿನಿಂದ ತಪ್ಪಿಸಿಕೊಳ್ಳಲು “ಮುಂಗಡ ಜಾಮೀನು” (Anticipatory Bail) ಪಡೆಯುವುದು ಹೇಗೆ ಎಂದು ಸ್ನೇಹಿತನ ಬಳಿ ಐಡಿಯಾ ಕೇಳಲು ಬಂದು ಹೊಸ ನಂಬರ್ ನೀಡಿದ್ದೇ ಈತನಿಗೆ ಮುಳುವಾಗಿದೆ.
ಸ್ನೇಹಿತ ನೀಡಿದ ಹೊಸ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿದ ಪೊಲೀಸರು ಶನಿವಾರ ತಿಮ್ಮರಾಯಪ್ಪನನ್ನು ಆತನದೇ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದಾರೆ. ಮೊದಮೊದಲು ಮಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ತಂದೆಯಂತೆ ನಟಿಸಿ ನಾಟಕವಾಡಿದ್ದ ತಿಮ್ಮರಾಯಪ್ಪ, ಪೊಲೀಸರು ತಮ್ಮದೇ ಶೈಲಿಯಲ್ಲಿ ಗ್ರಿಲ್ ಮಾಡಿದಾಗ ಮಗಳನ್ನು ತಾನೇ ಕುತ್ತಿಗೆ ಹಿಸುಕಿ ಕೊಂದ ಕರಾಳ ಸತ್ಯವನ್ನು ಒಪ್ಪಿಕೊಂಡಿದ್ದಾನೆ.