ಮಂಗಳೂರು : ಮಂಗಳೂರಿನ ಉರ್ವ ಅಶೋಕನಗರ ನಿವಾಸಿಯಾದ ಆಂಟನಿ ಮಸ್ಕರೇನ್ಹಸ್ (65) ಮಣ್ಣಿನಡಿ ಸಿಲುಕಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕುಂಟಿಕಾನ ಬಳಿಯ ಲೋಹಿತ್ ನಗರದಲ್ಲಿ ಗುರುವಾರ (ಮೇ 21) ಬೆಳಗ್ಗೆ 10 ಗಂಟೆಯ ಸುಮಾರಿಗೆ ಈ ಭೀಕರ ಅವಘಡ ಸಂಭವಿಸಿದೆ. ಈ ಭಾಗದ ಮೇಲ್ಭಾಗದಲ್ಲಿ ಮನೆಯೊಂದಿದ್ದು, ಕಳೆದ ವರ್ಷದ ಮಳೆಗಾಲದಲ್ಲಿ ಇಲ್ಲಿ ಭೀಕರವಾಗಿ ಮಣ್ಣು ಜರಿದಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ಆವರಣ ಗೋಡೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು.
ಆವರಣ ಗೋಡೆ ನಿರ್ಮಾಣದ ಗುತ್ತಿಗೆಯನ್ನು ಸೆಂಟ್ಓನಿಯನರ್ ಎಂಬವರು ವಹಿಸಿಕೊಂಡಿದ್ದರು. ಗುರುವಾರ ಬೆಳಗ್ಗೆ ಆಂಟನಿ ಅವರು ಇತರ ನಾಲ್ವರು ಕಾರ್ಮಿಕರೊಂದಿಗೆ ಸೇರಿ ಗೋಡೆ ನಿರ್ಮಾಣದ ಜಾಗದ ಪರಿಶೀಲನೆ ನಡೆಸುತ್ತಿದ್ದರು. ಅಲ್ಲದೆ ಗೋಡೆಗೆ ಅಳತೆ (Measurement) ಮಾಡುತ್ತಿದ್ದ ಸಂದರ್ಭದಲ್ಲಿ ಒಮ್ಮಿಂದೊಮ್ಮೆಗೇ ಮೇಲ್ಭಾಗದ ಬೃಹತ್ ಧರೆ ಜರಿದು ಇವರ ಮೇಲೆ ಬಿದ್ದಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕದ್ರಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹಾಗೂ ಸ್ಥಳೀಯರು ಅತ್ಯಂತ ಶ್ರಮವಹಿಸಿ ಭೀಕರ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ.

ಮಣ್ಣಿನ ಅಡಿಯಿಂದ ಆಂಟನಿ ಅವರನ್ನು ತಕ್ಷಣವೇ ಮೇಲಕ್ಕೆತ್ತಿ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಮಳೆಗಾಲದ ಆರಂಭಕ್ಕೂ ಮುನ್ನವೇ ಮಂಗಳೂರಿನಲ್ಲಿ ಇಂತಹದ್ದೊಂದು ಭೀಕರ ಧರೆ ಕುಸಿತದ ದುರಂತ ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read this : Kundgol : ತರ್ಲಘಟ್ಟ ಗ್ರಾಮದಲ್ಲಿ ರಸ್ತೆ ಬದಿಯಲ್ಲೇ 10 ವರ್ಷದ ಬಾಲಕನಿಗೆ ಇಂಜೆಕ್ಷನ್ ಚುಚ್ಚಿ ಮುಸುಕುಧಾರಿಗಳು ಪರಾರಿ!



