ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಅದರ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ವಿರುದ್ಧ ಕೆಲವು ಸಾಮಾಜಿಕ ಜಾಲತಾಣಗಳು ಮತ್ತು ಯುಟ್ಯೂಬ್ ಚಾನೆಲ್ಗಳು ಸುಳ್ಳು ಆರೋಪ ಹಾಗೂ ತಿರುಚಿದ ವಿಡಿಯೋಗಳ ಮೂಲಕ ನಿರಂತರವಾಗಿ ಅಪಪ್ರಚಾರ ಮಾಡುತ್ತಿರುವ ಬಗ್ಗೆ ತೀವ್ರ ಆಕ್ರೋಶ ಕೇಳಿಬಂದಿತ್ತು. ಈ ಹಿಂದೆ ಸಿವಿಲ್ ನ್ಯಾಯಾಲಯ ಇಂತಹ ಮಾನಹಾನಿಕರ ವಿಚಾರಗಳ ಪ್ರಸಾರಕ್ಕೆ ಕಟ್ಟುನಿಟ್ಟಿನ ತಡೆ ನೀಡಿದ್ದರೂ, ಕೆಲವು ಮಾಧ್ಯಮಗಳು ನಕಲಿ ಖಾತೆಗಳ ಮೂಲಕ ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ ನಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಿದ್ದವು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಕಾನೂನು ಹೋರಾಟದ ಗಂಭೀರತೆಯನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ನ ಏಕಸದಸ್ಯ ಪೀಠವು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಅತ್ಯಂತ ಮಹತ್ವದ ನಿರ್ದೇಶನ ನೀಡಿದೆ. ಸಿವಿಲ್ ನ್ಯಾಯಾಲಯ ಈಗಾಗಲೇ ನೀಡಿರುವ ಪ್ರತಿಬಂಧಕಾದೇಶವನ್ನು (ತಡೆಯಾಜ್ಞೆ) ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಅದರಂತೆ, ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ದುರುದ್ದೇಶಪೂರಿತ ಚರ್ಚೆ ಮತ್ತು ಸುಳ್ಳು ವರದಿಗಳನ್ನು ಪ್ರಸಾರ ಮಾಡುತ್ತಿರುವ 17 ಪ್ರಮುಖ ಮಾಧ್ಯಮ ಹಾಗೂ ಯುಟ್ಯೂಬ್ ಚಾನೆಲ್ಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಅಷ್ಟೇ ಅಲ್ಲದೆ, ನ್ಯಾಯಾಲಯದ ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ ಬಗ್ಗೆ ಮುಂದಿನ ವಿಚಾರಣೆಯ ವೇಳೆಗೆ ಕಡ್ಡಾಯವಾಗಿ ‘ಅನುಪಾಲನಾ ವರದಿ’ಯನ್ನು (Compliance Report) ಸಲ್ಲಿಸಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ಕಡಕ್ ಗಡುವು ನೀಡಿದೆ. ಕೋರ್ಟ್ ಆದೇಶ ಉಲ್ಲಂಘಿಸಿ ನಕಲಿ ಐಡಿಗಳ ಮೂಲಕ ಸುಳ್ಳು ಸುದ್ದಿ ಹರಡುವ ಕಿಡಿಗೇಡಿಗಳ ಅಕೌಂಟ್ಗಳನ್ನು ಬ್ಲಾಕ್ ಮಾಡಲು ಮತ್ತು ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಪೊಲೀಸ್ ಇಲಾಖೆ ಈಗ ಮುಂದಾಗಿದ್ದು, ಧರ್ಮಸ್ಥಳದ ವಿರುದ್ಧ ಸೈಬರ್ ದ್ವೇಷ ಸಾಧಿಸುತ್ತಿದ್ದವರಿಗೆ ಈ ತೀರ್ಪು ಬಿಗ್ ಶಾಕ್ ನೀಡಿದೆ
READ : Kundgol : ತರ್ಲಘಟ್ಟ ಗ್ರಾಮದಲ್ಲಿ ರಸ್ತೆ ಬದಿಯಲ್ಲೇ 10 ವರ್ಷದ ಬಾಲಕನಿಗೆ ಇಂಜೆಕ್ಷನ್ ಚುಚ್ಚಿ ಮುಸುಕುಧಾರಿಗಳು ಪರಾರಿ!



